ಉಪ್ಪಿನಂಗಡಿ, ಡಿ. 11 : ಕಳೆದುಹೋಗಿದ್ದ ಚಿನ್ನಾಭರಣ, ನಗದು ಹೊಂದಿದ್ದ ಪರ್ಸ್ ಅನ್ನು ಬಜತ್ತೂರು ಗ್ರಾಮ ವಲಾಲ್ ಬೆದ್ರೂಡಿ ವಿದ್ಯಾನಗರ ಮಂತ್ರ ನಿಲಯ ನಿವಾಸಿ ವಿನಯ್ ನಿವೇದಿತಾ ರವರು ವಾರಸುದಾರರಿಗೆ ಹಸ್ತಾಂತರಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಗೆ ವಾರಸುದಾರರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿ, ಗೌರವಿಸಿದ್ದಾರೆ.
ಬಂದಾರು ಗ್ರಾಮದ ಅಂಡಿಲ ನಿವಾಸಿ ರಕ್ಷಿತ್ ಇವರ ಪತ್ನಿ ದೀಕ್ಷ ರಕ್ಷಿತ್ ರವರು ರೂ 2.50 ಲಕ್ಷ ಮೌಲ್ಯದ ಚಿನ್ನ ಹಾಗೂ 10 ಸಾವಿರ ನಗದು ಇದ್ದ ಪರ್ಸ್ ಉಪ್ಪಿನಂಗಡಿ ಹೋಟೆಲ್ ವೊಂದರಲ್ಲಿ ಡಿ. 10 ರಂದು ಕೈ ತಪ್ಪಿ ಕಳೆದು ಹೋಗಿದ್ದರು. ಈ ಬಗ್ಗೆ ಹೋಟೆಲ್ ನಲ್ಲಿ ವಿಚಾರಿಸಿ, ಪರಿಶೀಲಿಸಿದಾಗ ವಿನಯ್ ನಿವೇದಿತಾರ ಬಳಿ ಇರುವುದು ತಿಳಿಯುತ್ತದೆ. ಅಲ್ಲದೆ, ವಿನಯ್ ನಿವೇದಿತಾರವರು ತಕ್ಷಣವೇ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸುತ್ತೇವೆಂದು ಭರವಸೆ ನೀಡಿದ್ದರು. ಅದರಂತೆ ಇಂದು ಉಪ್ಪಿನಂಗಡಿ ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರನ್ನು ಕಳೆದುಕೊಂಡ ಶ್ರೀಮತಿ ದೀಕ್ಷಾ ರಕ್ಷಿತ್ ದಂಪತಿಗಳು ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿದರು. ಉಪ್ಪಿನಂಗಡಿ ಪೊಲೀಸ್ ಅಧಿಕಾರಿ ವರ್ಗಕ್ಕೂ ಕೃತಜ್ಞತೆ ಸಲ್ಲಿಸಿದರು.

