ಧರ್ಮಸ್ಥಳ : 93ನೇ ಸಾಹಿತ್ಯ ಸಮ್ಮೇಳನ 2025 ಕ್ಷೆತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಇಂದು ನಡೆಯಿತು. 93ನೇ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿಗಳು ಮತ್ತು ಅಂಕಣಕಾರರಾದ ಪ್ರೊ. ಪ್ರೇಮಶೇಖರ ಇವರು ಉದ್ಘಾಟಿಸಿದರು.
ದೀಪ ಬೆಳಗಿಸಿ ಉದ್ಘಾಟಿಸಿದ ಪ್ರೊ. ಪ್ರೇಮಶೇಖರ ಇವರು ಮಾತನಾಡಿ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದು ಜೀವನದಲ್ಲಿ ಒಂದೇ ಬಾರಿ ಸಿಗುವ ಸೌಭಾಗ್ಯ, ಅದು ನನಗೆ ಪ್ರಾಪ್ತವಾಗಿದ್ದು ನನ್ನ ಭಾಗ್ಯ. ಮನುಷ್ಯನ ಹೊಟ್ಟೆ ಪಾಡಿನ ಸಮಸ್ಯೆ ಬಗೆಹರಿದು, ವಿರಾಮದಲ್ಲಿ ಕುಳಿತು ಯೋಚಿಸುತ್ತಿದ್ದಾಗ ಸಾಹಿತ್ಯ, ಕಲೆ ಸೃಷ್ಟಿಯಾಯಿತು ಅದರ ಜೊತೆ ಜೊತೆಯಲ್ಲಿ ನಾಗರೀಕತೆ ಬೆಳೆಯಿತು.

ಸಮ್ಮೇಳನದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸ್ವಾಗತ ಭಾಷಣದಲ್ಲಿ, ಕೃಷಿಯಿಲ್ಲದ ದೇಶ ದುಃಸ್ಥಿತಿ ಹೊಂದುತ್ತದೆ ಎಂಬ ಮಾತು ಸಂಸ್ಕೃತಿಯಲ್ಲಿದೆ. ಅಂತೆಯೇ ಸಾಹಿತ್ಯ ಕೃಷಿಯೂ ಇಲ್ಲದ ಸಮಾಜ ಸತ್ವಹೀನವಾಗಬಹುದು. ಆದ್ದರಿಂದ ಸಾಹಿತ್ಯವನ್ನು ಬರೆಯುವ, ಓದುವ ಮತ್ತು ಸಾಹಿತ್ಯದ ಬಗ್ಗೆ ಚಿಂತನ – ಮಂಥನ ಮಾಡುವ ಕೆಲಸಗಳು ನಿತ್ಯ ನಿರಂತರ ನಡೆಯಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ನಮ್ಮಧರ್ಮಸ್ಥಳ ಕ್ಷೇತ್ರವು ಸಾಹಿತ್ಯದ ಚಟುವಟಿಕೆಗಳಿಗೆ ವಿಶೇಷ ಗಮನ ಹರಿಸುತ್ತಾ ಬಂದಿದೆ. ಅದರಲ್ಲೂ ಲಕ್ಷದೀಪೋತ್ಸವದ ಸಾಹಿತ್ಯ ಸಮ್ಮೇಳನ ಇಂದು ನಾಡಿನಾದ್ಯಂತ ಸುಪ್ರಸಿದ್ಧವಾಗಿದ್ದು, ಇದಕ್ಕೆ ಸಾಹಿತ್ಯಾಸಕ್ತರಿಂದ ಮತ್ತು ಸಾಹಿತ್ಯದ ಅಭಿಮಾನಿಗಳಿಂದ ದೊಡ್ಡ ಗೌರವ ಪ್ರಾಪ್ತವಾಗುತ್ತಿದೆ ಎಂದರು.
ಸಮ್ಮೇಳನದಲ್ಲಿ ಪ್ರೋ ಪ್ರೇಮಶೇಖರ ಇವರು ಬರೆದಿರುವ ‘ಅಪ್ಪಿದ್ದ ಭಾರತ ಇಷ್ಟಾಗಿ ಹೋದ ಕರುಣಕಥೆ’ *75ರ ಭಾರತ’ ಎಂಬ ಪುಸ್ತಕ ಅನಾವರಣಗೊಳಿಸಲಾಯಿತು. ಇನ್ನು, ಸಾಹಿತ್ಯ ಸಮ್ಮೇಳನದಲ್ಲಿ ವ್ಯಾಖ್ಯಾನಕಾರರಾದ ಶ್ರೀಮತಿ ಶಾಂತಾ ನಾಗಮಂಗಲ ಬೆಂಗಳೂರು, ‘ವಿವೇಕಹಂಸ’ ಮಾಸಪತ್ರಿಕೆ ಸಂಪಾದಕರಾದ ಡಾ. ರಘು ವಿ, ಸಾಹಿತಿ ಡಾ. ಬಿ. ಎಮ್ ಶರಭೇಂದ್ರ ಸ್ವಾಮಿ ಧಾರವಾಡ ಇವರು ಉಪನ್ಯಾಸ ನೀಡಲಿದ್ದಾರೆ.
ಇನ್ನು, ಕಾರ್ಯಕ್ರಮದ ವೇದಿಕೆಗೆ ಅತಿಥಿಗಳನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ವೇದಿಕೆಯಲ್ಲಿ ಕ್ಷೇತ್ರದ ದೇವಾಲಯ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ., ಎಸ್ ಡಿಎಮ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.


