ರಷ್ಯಾದಲ್ಲಿ ಭಾರತೀಯರಿಗೆ ಫುಲ್ ಡಿಮ್ಯಾಂಡ್ – ಕಸ ಗುಡಿಸೋ ಕೆಲಸಕ್ಕೆ ತಿಂಗಳಿಗೆ 1.20 ಲಕ್ಷ ಸಂಬಳ !

ಹೊಸದಿಲ್ಲಿ, ಜ. 29 : ಭಾರತದಲ್ಲಿ ಲಕ್ಷಕ್ಕೂ ಅಧಿಕ ಸಂಬಳ ಸಿಗಬೇಕು ಅಂದರೆ ಒಂದು ಒಳ್ಳೆಯ ಉದ್ಯೋಗ ಬೇಕು ಅದರಲ್ಲೂ ಲಕ್ಷಾಂತರ ಸಂಬಳ ಸಿಗಬೇಕು ಅಂದರೆ ಉತ್ತಮ ಉದ್ಯೋಗದ ಜೊತೆಗೆ ಅನುಭವವೂ ಬೇಕು. ಆದರೆ, ರಷ್ಯಾ ಹಾಗಲ್ಲ ಅಲ್ಲಿ ಕಸ ಗುಡಿಸುವ ಕೆಲಸಕ್ಕೆ ಬರೋಬ್ಬರಿ ತಿಂಗಳಿಗೆ 1.20 ಲಕ್ಷ ಸಂಬಳ ನೀಡುತ್ತೆ ಅಂತೆ. ಈಗಾಗಲೇ ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿರುವ ರಷ್ಯಾ, ಇದನ್ನು ನೀಗಿಕೊಳ್ಳಲು ಮಾನವ ಸಂಪನ್ಮೂಲ ಹೆಚ್ಚಿರುವ ಭಾರತದತ್ತ ಕಣ್ಣು ಹಾಕಿದೆ.

Advertisement

ಈ ವರ್ಷ ಕನಿಷ್ಠ 40,000 ಭಾರತೀಯ ನಾಗರಿಕರು ಕಾರ್ಮಿಕರಾಗಿ ರಷ್ಯಾಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಅಂದರೆ 2025ರ ಅಂತ್ಯದ ವೇಳೆಗೆ ಸುಮಾರು 80,000 ಭಾರತೀಯರು ರಷ್ಯಾದಲ್ಲಿ ಉದ್ಯೋಗಿಗಳಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದಿಂದ ರಷ್ಯಾಕ್ಕೆ ಅರೆಕುಶಲಿ ಮತ್ತು ಕುಶಲ ಕಾರ್ಮಿಕರು ತೆರಳಲು ಅನುವಾಗುವಂತೆ ಎರಡು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದ್ದವು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದರು. ಅಕ್ರಮ ವಲಸೆ ತಡೆಗಟ್ಟಲು ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಿಂದ ರಷ್ಯಾದಲ್ಲಿ ಭಾರತೀಯ ಕಾರ್ಮಿಕರು ಉದ್ಯೋಗವನ್ನು ಪಡೆಯಲು ಮತ್ತು ಮಧ್ಯವರ್ತಿಗಳಿಂದ ವಂಚನೆಗೆ ಒಳಗೊಳಗಾಗುವುದನ್ನು ತಪ್ಪಿಸುವ ಆಶಯವೂ ಈ ಒಪ್ಪಂದದ ಗುರಿಯಾಗಿದೆ.

ಭಾರತೀಯ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರು ರಷ್ಯಾದ ಬೀದಿಗಳಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿರುವುದರ ಬಗ್ಗೆ ಪ್ರಕಟವಾದ ಇತ್ತಿಚಿನ ವರದಿಯೊಂದು ಎಲ್ಲರ ಗಮನ ಸೆಳೆದಿತ್ತು. ಕೆಲ ತಿಂಗಳ ಹಿಂದೆಯಷ್ಟೇ ಮುನ್ಸಿಪಲ್‌ ರಸ್ತೆ ನಿರ್ವಹಣೆ ಮಾಡುವ ಸಲುವಾಗಿ 15 ಮಂದಿ ಭಾರತೀಯ ಕಾರ್ಮಿಕರು ಸೇಂಟ್‌ ಪೀಟರ್ಸ್ ಬರ್ಗ್‌ಗೆ ಬಂದಿಳಿದಿದ್ದರು. ಅವರಲ್ಲಿ ಸಾಫ್ಟ್‌ವೇರ್‌ ಕುಶಲಿ ಕೂಡ ಒಬ್ಬರಾಗಿದ್ದರು. ರಷ್ಯಾದ ರಸ್ತೆ ನಿರ್ವಹಣಾ ಸಂಸ್ಥೆ ಕೊಲೊಮ್ಯಾಜ್ಸ್ಕೊಯೆ ಈ ನೇಮಕ ಮಾಡಿಕೊಂಡಿತ್ತು. ರಸ್ತೆ ಗುಡಿಸುವುದು, ಚಳಿಗಾಲದಲ್ಲಿ ರಸ್ತೆ ನಿರ್ವಹಣೆಯನ್ನು ಭಾರತೀಯ ಉದ್ಯೋಗಿಗಳಿಗೆ ನೀಡಲಾಗಿತ್ತು.

ಸೇಂಟ್‌ ಪೀಟರ್ಸ್ ಬರ್ಗ್‌ ನ ಬೀದಿಗಳಲ್ಲಿ ಕಸ ಗುಡಿಸುವ ಕೆಲಸ ಮಾಡುವ ಭಾರತೀಯ ಕಾರ್ಮಿಕರಿಗೆ ತಿಂಗಳಿಗೆ 1,20,541 ರೂ. ವೇತನ ನೀಡಲಾಗುತ್ತಿದೆ ಎಂದು ಫಾಂಟಾಕಾ ಎಂಬ ಸಂಸ್ಥೆ ವರದಿ ಮಾಡಿದೆ. ” ನಾವು ಭಾರಿ ಸಂಬಳವನ್ನು ನೀಡುತ್ತಿದ್ದೇವೆ. ಇದರೊಂದಿಗೆ ಉಚಿತ ಊಟ, ಉಚಿತ ವಸತಿಯ ವ್ಯವಸ್ಥೆಯ ಜೊತೆಗೆ ರಷ್ಯಾ ಭಾಷೆಯನ್ನು ಕಲಿಸುವ ಕೋರ್ಸ್‌ ಸಹ ಇರಲಿದೆ. ಇನ್ನು, ಸೇಂಟ್‌ ಪೀಟರ್ಸ್ ಬರ್ಗ್‌ ವೊಂದರಲ್ಲೇ ಕೆಲಸ ಮಾಡಲು 3ಸಾವಿರಕ್ಕೂ ಅಧಿಕ ಭಾರತೀಯರು ತುದಿಗಾಲಲ್ಲಿ ನಿಂತಿದ್ದಾರೆ” ಎಂದು ರಷ್ಯಾದ ನಗರಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೆ ರಷ್ಯಾದ ಆರ್ಥಿಕ ತಜ್ಞರು ನೀಡುವ ವಿವರಣೆಯೇ ಬೇರೆ. ”ಭಾರತೀಯ ಉದ್ಯೋಗಿಗಳಿಗೆ ರಷ್ಯಾ ಹೆಚ್ಚು ಆದ್ಯತೆ ನೀಡುತ್ತಿದೆ. ಏಕೆಂದರೆ ನಮ್ಮ ದೇಶದಲ್ಲಿ ಮುಸ್ಲಿಮರ ಸಂಖ್ಯೆಯನ್ನು ಮಿತಗೊಳಿಸುವ ಉದ್ದೇಶವಿದೆ. ಹಿಂದೂ ಉದ್ಯೋಗಿಗಳು ಹೆಚ್ಚು ಬರುತ್ತಾರೆ ಎಂದು ಸರಕಾರ ಭಾವಿಸಿದೆ. ನಮ್ಮಲ್ಲಿ ರಸ್ತೆ, ಬೀದಿಗಳನ್ನು ಶುಚಿಗೊಳಿಸುವುದೂ ಸೇರಿದಂತೆ ಕುಶಲರಹಿತ ಕೆಲಸಗಾರರ ಕೊರತೆಯೇನೂ ಇಲ್ಲ. ನಮಗೆ ಬೇಕಿರುವುದು ಹೆಚ್ಚು ಕುಶಲಿಗಳು. ಆದರೆ ಈಗ ಪರೀಕ್ಷೆ ನಡೆಯುತ್ತಿದೆ. ಈ ಜನ ನಿಜಕ್ಕೂ ರಷ್ಯಾ ಆರ್ಥಿಕತೆಗೆ ಹೊಂದಿಕೊಳ್ಳಬಲ್ಲರೇ ಎಂಬುದನ್ನು ಕಂಡುಕೊಳ್ಳಲಾಗುತ್ತಿದೆ,” ಎಂದು ಅರ್ಥಶಾಸ್ತ್ರಜ್ಞ ಆಂಡ್ರೆ ಯಾಕೊವ್ಲೆವ್‌ ಹೇಳಿದ್ದಾರೆ. ಅಲ್ಲದೆ,”ರಷ್ಯಾಗೆ ಕಾರ್ಮಿಕರ ಅಗತ್ಯ ತುಂಬ ಇದೆ. ಭಾರತಕ್ಕೆ ನಿರುದ್ಯೋಗವನ್ನು ರಫ್ತು ಮಾಡುವ ಅಗತ್ಯವಿದೆ,” ಎಂದು ಭಾರತೀಯ ರಾಜತಾಂತ್ರಿಕರೊಬ್ಬರು ಹೇಳಿರುವುದಾಗಿ ಡಿಡಬ್ಲ್ಯೂ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.