ಬೆಳ್ತಂಗಡಿ, ಜ. 31 : ತಾಲೂಕಿನ ಹಲವು ಭಾಗಗಳಲ್ಲಿ ಕಾಡಾನೆ ಹಾಗೂ ಚಿರತೆಯ ಹಾವಳಿ ಮುಂದುವರಿದಿದೆ. ಜ. 29ರ ರಾತ್ರಿ ಶಿಬಾಜೆ, ದಿಡುಪೆ ಪರಿಸರದ ತೋಟಗಳಿಗೆ ನುಗ್ಗಿ ಬಾಳೆ ಗಿಡಗಳಿಗೆ ಹಾನಿ ಮಾಡಿದೆ ಎಂದು ವರದಿಯಾಗಿದೆ.
ಶಿವಾಜಿ ಪತ್ತಿಮಾರು ರಾಘವೇಂದ್ರ ಅಭ್ಯಂಕರ್ಅವರ ತೋಟಕ್ಕೆ ದಾಳಿ ಇಟ್ಟ ಕಾಡಾನೆ ಬಾಳೆ ಗಿಡಗಳನ್ನು ಸೀಳಿ ಹಾಕಿದೆ. ದಿಡುಪೆಯ ನಂದಿ ಕಾಡು, ಮಲ್ಲ ಪರಿಸರದಲ್ಲಿ ಮೂರು ಕಾಡಾನೆಗಳ ಸಂಚಾರ ಕಂಡುಬಂದಿದ್ದು, ಕೊಡಂಗೆ ಗದ್ದೆ ಸತೀಶ್ ಅವರ ತೋಟಕ್ಕೆ ದಾಳಿ ಮಾಡಿ 25ಕ್ಕೂ ಅಧಿಕ ಬಾಳೆ ಗಿಡಗಳಿಗೆ ಹಾನಿ ಮಾಡಿವೆ. ಇದಲ್ಲದೇ ಸ್ಥಳೀಯ ಮಲ್ಲ ರಾಮಣ್ಣ ಗೌಡ ಅವರ ಮನೆ ಹತ್ತಿರ ಸಂಚರಿಸಿದ ಕಾಡಾನೆ ಮನೆ ಬಳಕೆಗಾಗಿ ಇದ್ದ ಕೆರೆಗೆ ಇಳಿದು ನೀರನ್ನು ಕೆಸರುಮಯಗೊಳಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನಡ ಕನ್ಯಾಡಿಯಲ್ಲಿ ಚಿರತೆ ಪ್ರತ್ಯಕ್ಷ :

FILE PHOTO
ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿ-1 ಗ್ರಾಮದ ಗುರಿಪಳ್ಳದ ಬಂಡ್ರತ್ತಿಲ್ನ ರಮಾನಂದ ಶರ್ಮ ಅವರ ಗದ್ದೆಯೊಂದರಲ್ಲಿ ಚಿರತೆ ಕಾಣ ಸಿಕ್ಕಿದೆ ಎನ್ನಲಾಗಿದೆ. ಮಹಿಳೆಯೊಬ್ಬರು ಮನೆ ಸಮೀಪ ಹೂವು ಕೊಯ್ಯಲು ತೆರಳಿದ್ದ ವೇಳೆ ಗದ್ದೆಯ ಮಧ್ಯ ಭಾಗದಲ್ಲಿ ಚಿರತೆ ಇರುವುದನ್ನು ಗಮನಿಸಿದ್ದಾರೆ. ಭೀತಿಗೊಂಡ ಮಹಿಳೆ ಮನೆಯ ಕಡೆಗೆ ಓಡಿದ್ದರೆ ಚಿರತೆ ಅರಣ್ಯ ಭಾಗಕ್ಕೆ ತೆರಳಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆಯಲ್ಲಿ ಶುಕ್ರವಾರ ಮುಂ ಜಾನೆ 4ರ ಸುಮಾರಿಗೆ ಚಿರತೆಯೊಂದು ಅಡೊಂದನ್ನು ಕೊಂದು ಹಾಕಿದೆ ಎನ್ನಲಾಗಿದೆ. ಕಳೆದ ವಾರ ಅಂಡಿರ್ಮಾರ್ನಲ್ಲಿ ಮಂಜಪ್ಪ ನಾಯ್ಕ ಅವರ ಮೇಲೆ ಚಿರತೆ ದಾಳಿ ನಡೆಸಿದ್ದರೆ 3 ದಿನಗಳ ಹಿಂದೆ ಅಲ್ಲಿನ ಕಯ್ಯಂಗು ಪ್ರದೇಶದಲ್ಲಿ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿತ್ತು. ಆದರೆ, ಇದೀಗ ಮತ್ತೆ ಚಿರತೆ ಕಾಣಸಿಕ್ಕಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ಹಲವು ಸಮಯಗಳಿಂದ ಕಾಡು ಪ್ರಾಣಿಗಳ ಉಪಟಳದಿಂದಾಗಿ ನಾಗರಿಕರು ಬೇಸತ್ತು ಹೋಗಿದ್ದಾರೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

