ಮಂಗಳೂರು, ಮಾ. 18 : ಭೂ ವ್ಯವಹಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಭೂ ವ್ಯವಹಾರಕ್ಕೆ ಸಂಬಂಧಿಸಿ ಆರೋಪಿ ಶರೀಫ್ ಎಂಬಾತನು ಸುರತ್ಕಲ್ ಕಾನ ಮತ್ತು ವಾವಂಜೂರಿನಲ್ಲಿ ಸುಮಾರು 2 ಕೋ.ರೂ.ವನ್ನು ಹೂಡಿಕೆ ಮಾಡಿದ್ದ. ಇದಕ್ಕೆ ಸಂಬಂಧಿಸಿ ನಗರದ ಮಲ್ಲಿಕಟ್ಟೆಯ ಮೋಹನ್ ದಾಸ್ ಶೆಟ್ಟಿ (56) ಎಂಬವರು ತನಗೆ ಮೋಸ ಮಾಡಿದ್ದಾರೆಂದು ಸಿಟ್ಟಿನಿಂದ ಮಂಗಳವಾರ ಪೂ.11ಕ್ಕೆ ನಗರದ ಆರ್ಯ ಸಮಾಜ ರಸ್ತೆಯ ಬದಿಯಲ್ಲಿ ಮಾತುಕತೆ ನಡೆಸಿದ್ದ ಬಳಿಕ ಮೋಹನ್ ದಾಸ್ ಶೆಟ್ಟಿಯ ಮೊಬೈಲನ್ನು ಆರೋಪಿ ಕಸಿದುಕೊಂಡಿದ್ದ. ನಂತರ ಮೋಹನ್ದಾಸ್ ಶೆಟ್ಟಿ ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಆರೋಪಿ ಶರೀಫ್ ಸಿಟ್ಟಿನಿಂದ ತನ್ನ ಕಾರನ್ನು ಅತಿ ವೇಗವಾಗ ಚಲಾಯಿಸಿಕೊಂಡು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿಹೊಡೆದು ಕೊಲೆ ಮಾಡಲು ಯತ್ನಿಸಿದ್ದ ಎಂದು ದೂರಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ಆರೋಪಿ ಶರೀಫ್ನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

