ಸುಳ್ಯ, ಜ. 30 : ಆಟೋರಿಕ್ಷಾವೊಂದಕ್ಕೆ ಹಿಂದಿನಿಂದ ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದ ಅಟೋ ರಿಕ್ಷಾದ ಚಾಲಕ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟಿಪ್ಪರ್ ವಾಹನದ ಅಡಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಣಿ – ಮೈಸೂರು ಹೆದ್ದಾರಿಯ ಕೊಡಗು ಸಂಪಾಜೆ ಗೇಟ್ ಬಳಿ ಸಂಭವಿಸಿದೆ. ಸುಂದರ ಚಿಟ್ಟಿಕಾನ (56) ಮೃತ ಅಟೋರಿಕ್ಷಾ ಚಾಲಕ.
ಅಟೋರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಕೊಡಗು- ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಅಟೋರಿಕ್ಷಾಕ್ಕೆ ಗುದ್ದಿ ಪರಾರಿಯಾಗಿದೆ. ಈ ವೇಳೆ ಅಟೋ ಚಾಲಕ ರಸ್ತೆಗೆ ಬಿದ್ದಿದ್ದು, ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ಅಡಿಗೆ ರಿಕ್ಷಾ ಚಾಲಕ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಟೋ ರಿಕ್ಷಾದಲ್ಲಿದ್ದ ಇನ್ನೋರ್ವ ಪ್ರಯಾಣಿಕನಿಗೂ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತ ಎಸಗಿದ ಕಾರು ನಿಲ್ಲಿಸದೇ ಅಲ್ಲಿಂದ ತೆರಳಿದೆ.

