ಬೆಂಗಳೂರು : ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ತಮಿಳುನಾಡಿನ ಜನಪ್ರಿಯ ನಾಯಕ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆಯಲಿದ್ದಾರೆನ್ನುವ ವಿಚಾರ. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕ, ವಿಧಾನಪರಿಷತ್ ಸದಸ್ಯ ಸಿಟಿ ರವಿಯವರು ಸ್ಪಷ್ಟನೆಯನ್ನು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಅಣ್ಣಾಮಲೈ ಅವರು ಬಿಜೆಪಿಯನ್ನು ತೊರೆಯುವ ಸಾಧ್ಯತೆ ಇಲ್ಲವೆಂದಿದ್ದಾರೆ.
ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ, ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದರು. ರಾಜಕೀಯಕ್ಕೆ ಎಂಟ್ರಿಯಾದ ಕೆಲವೇ ತಿಂಗಳಲ್ಲಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದರು. ತಮಿಳುನಾಡಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಗಣನೀಯ ಪಾತ್ರವನ್ನು ವಹಿಸಿದ್ದ ಅಣ್ಣಾಮಲೈ, ಎಐಎಡಿಎಂಕೆ ನಾಯಕರ ಜೊತೆಗಿನ ಮನಸ್ತಾಪದಿಂದ ಪಕ್ಷ ತೊರೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಸ್ಪಷ್ಟನೆಯನ್ನು ಕೊಟ್ಟ ಸಿಟಿ ರವಿ, ಇದೊಂದು ’ಕರ್ನಾಟಕದಲ್ಲಿ ಹರಿದಾಡುತ್ತಿರುವ ವದಂತಿ’ ಎಂದಿದ್ದಾರೆ.
“ಅಣ್ಣಾಮಲೈ ಅವರು ಕೊಟ್ಟಿದ್ದು ಮಾರ್ಮಿಕ ಹೇಳಿಕೆ ಮಾತ್ರ, ವೈಯಕ್ತಿಕವಾಗಿ ಆಸಕ್ತಿಯಿಂದ ರಾಜಕೀಯಕ್ಕೆ ಬಂದಿದ್ದೇನೆಯೇ ಹೊರತು, ಯಾರ ಒತ್ತಾಯದಿಂದಲೂ ಅಲ್ಲ ಎನ್ನುವ ದೃಷ್ಟಿಯಲ್ಲಿ ಅವರು ಹೇಳಿದ್ದಾರೆ ” ಎಂದು ಸ್ಪಷ್ಟಪಡಿಸಿದ್ದಾರೆ.
ಅಣ್ಣಾಮಲೈ ಅವರು ನೀಡಿದ್ದ ಹೇಳಿಕೆ, ಬೇರೆ ಬೇರೆ ರೀತಿಯಲ್ಲಿ ಕರ್ನಾಟಕದಲ್ಲಿ ಮಾತ್ರ ಸುದ್ದಿಯನ್ನು ಮಾಡುತ್ತಿದೆ. ನಾನು ಖುದ್ದಾಗಿ ಅವರ ಬಳಿ ಮಾತನಾಡಿದ್ದೇನೆ. ಆ ರೀತಿಯ ಯಾವ ನಿರ್ಧಾರಕ್ಕೂ ನಾನು ಬಂದಿಲ್ಲ. ಕರ್ನಾಟಕದಲ್ಲಿ ಮಾತ್ರ ಟ್ವಿಸ್ಟ್ ಮಾಡಿ ಸುದ್ದಿಯನ್ನು ಮಾಡಲಾಗುತ್ತಿದೆ. ಪಾರ್ಟಿ ನನಗೆ ಏನು ಜವಾಬ್ದಾರಿಯನ್ನು ಕೊಟ್ಟಿದೆಯೋ, ಆ ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆಯೋ ಹೊರತು ಓಡಿ ಹೋಗುವುದಿಲ್ಲ ಎನ್ನುವ ಮಾತನ್ನು ನನ್ನಲ್ಲಿ ಅಣ್ಣಾಮಲೈ ಹೇಳಿದ್ದಾರೆ ಎಂದು ಸಿಟಿ ರವಿ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

