ಬೆಂಗಳೂರು, ಫೆ. 02 : ಸಿಎಂ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸುತ್ತಿದ್ದಾರೆ. ಮುಂದೆ 18, 19ನೇ ಆಯವ್ಯಯ ಮಂಡಿಸ್ತಾರಂತೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅಭಿನಂದನೆ ಸಲ್ಲಿಸಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಬೆಂಬಲಿಸಿ ಅವರು ಮಾತನಾಡಿದರು.
ಇನ್ನು ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಅವರು 17 ನೇ ಬಜೆಟ್ ಮಂಡಿಸುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆರಡು ಬಜೆಟ್ ಮಂಡನೆ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಂಗ್ರಾಜುಲೇಷನ್ಸ್ ಎಂದ ಆರ್ ಅಶೋಕ್, ಸಿದ್ದರಾಮಯ್ಯ ಅವರು, ಹೌದು ಹುಲಿಯಾ ಹೋಗಿ ಹೌದು ಇಲಿಯಾ ಆಗಿದ್ದಾರೆ ಎಂದು ಸಿಎಂಗೆ ಆರ್ ಅಶೋಕ್ ಟಾಂಗ್ ನೀಡಿದರು. ಸಿಎಂ ಡಲ್ ಆಗಿದ್ದಾರೆ ಹಾಗೂ ಮೊದಲಿನ ಹಾಗಿಲ್ಲ ಇವಾಗ. ಹೌದು ಹುಲಿಯಾ ಆಗಿ ಅವರು ಉಳಿದಿಲ್ಲ, ಹೌದು ಇಲಿಯಾ ಆಗಿದ್ದಾರೆ ಎಂದರು.
ರಾಜ್ಯದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ನೆಲೆಯೂರಿದ್ದಾರೆ. ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿಕೊಡುತ್ತಿದ್ದಾರೆ. 5 ಸಾವಿರ ಕೊಟ್ಟರೆ ಆಧಾರ್ ಮಾಡಿಸಿಕೊಡುತ್ತಿದ್ದಾರೆ ಎಂದು ಆರೋಪಿಸಿದರು. ನಮ್ಮವರು 1000ರೂ ಕೂಲಿ ಕೇಳುತ್ತಿದ್ದಾರೆ. ಅಕ್ರಮ ನುಸುಳುಕೋರ ಬಾಂಗ್ಲಾದವರು 300 ರೂ ಗೆ ಕೂಲಿ ಮಾಡ್ತಾರೆ. ನಮ್ಮವರೇ ಕಡಿಮೆ ಕೂಲಿ ಆಸೆಗೆ ಬಾಂಗ್ಲಾದವರಿಗೆ ಕೆಲಸ ಕೊಡುತ್ತಿದ್ದಾರೆ. ರಾಜ್ಯದಲ್ಲಿ ನಮ್ಮವರು 37 ಲಕ್ಷ ಜನರು ಮನೆಗಳಿಗಾಗಿ ಅರ್ಜಿ ಹಾಕಿದ್ದಾರೆ. ಆದರೆ, ಕೋಗಿಲುನಲ್ಲಿ ಅಕ್ರಮ ಬಾಂಗ್ಲಾದವರಿಗೆ ಮನೆ ಕೊಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು. ಮುಂದಿನ ಭವಿಷ್ಯವನ್ನು ಯೋಚನೆ ಮಾಡಿ, ಕಾಶ್ಮೀರ ಆಗುವುದು ಬೇಡ. ಮುಲಾಜಿಲ್ಲದೆ ಅಕ್ರಮ ಬಾಂಗ್ಲಾ ವಾಸಿಗಳನ್ನು ಹೊರಹಾಕಿ ಎಂದು ಅಶೋಕ್ ಆಗ್ರಹಿಸಿದರು. ಲೂಟಿಕೋರ ಅಧಿಕಾರಿಗಳ ವಿರುದ್ಧ ಕ್ರಮ ಆಗುತ್ತಿಲ್ಲ. ಇಲಾಖೆಗಳಲ್ಲಿ ಲೂಟಿ ನಿಲ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವ ಆಡ್ತಿದೆ. ಸರ್ಕಾರಕ್ಕೆ ನೈತಿಕತೆ ಇಲ್ಲ ಅಂತ ಹೇಳಿದರು.

