ಬಾರ್ಯ, ಡಿ. 06 : ಶಾಸಕ ಹರೀಶ್ ಪೂಂಜಾ ಅವರ ಅಧ್ಯಕ್ಷತೆಯ ಜನಸ್ಪಂದನ ಸಭೆಯು ಬಾರ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ, ಇಲ್ಲಿನ ಅವ್ಯವಸ್ತೆಯ ಬಗ್ಗೆ ಶಾಸಕ ಹರೀಶ್ ಪೂಂಜಾ ಆಕ್ರೋಶ ಹೊರಹಾಕಿ, ಪಂ. ಅಭಿವೃದ್ಧಿ ಅಧಿಕಾರಿಯ ವಿರುದ್ಧ ಖಂಡನೆ ವ್ಯಕ್ತಪಡಿಸಿದ್ದಾರೆ.
ಜನಸ್ಪಂದನ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಭಾಗಿಯಾಗಿದ್ದರು. ಆದರೆ, ಸಭಾಂಗಣದಲ್ಲಿ ಧ್ವನಿವರ್ಧಕವಾಗಲಿ ಅಥವಾ ಇನ್ಯಾವುದೇ ಸಮರ್ಪಕ ವ್ಯವಸ್ಥೆಯಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದ ಶಾಸಕ ಹರೀಶ್ ಪೂಂಜಾ ಅವರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೇ ಸ್ಥಳದಲ್ಲೇ ಸೂಚಿಸಿದ್ದಾರೆ.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಅರಣ್ಯ ಇಲಾಖಾಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಾಜಿ ತಾ.ಪಂ.ಸದಸ್ಯ ಮಂಜುನಾಥ ಸಾಲ್ಯಾನ್ ಅವರು ಮಂಗಗಳ ಹಾವಳಿಯಿಂದ ಕೃಷಿಕರಿಗಾಗುವ ತೊಂದರೆಯನ್ನು ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತರಲು ಮಂಗ, ತಿಂದ ತೆಂಗಿನ ಚಿಪ್ಪುಗಳ ಮಾಟೆಯನ್ನು ತಲೆಯಲ್ಲಿ ಹೊತ್ತು ವೇದಿಕೆಯತ್ತ ಬಂದು ಅರಣ್ಯ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದರು.

