ಬೆಳಗಾವಿ, ಡಿ. 09 : ರಾಜ್ಯದ ಬೀಡಿ ಕಾರ್ಮಿಕರಿಗೆ ಮುಂದಿನ ಒಂದು ತಿಂಗಳ ಒಳಗೆ ಕನಿಷ್ಠ ವೇತನ ನಿಗದಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಸೋಮವಾರ ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯ ಬೀಡಿ ಕಾರ್ಮಿಕರು ಬೀಡಿ ಕೆಲಸವನ್ನೇ ನಂಬಿ ಬದುಕುತ್ತಿದ್ದಾರೆ. ರಾಜ್ಯ ಸರಕಾರ 2018ರ ಏಪ್ರಿಲ್ 1ರಂದು ಬೀಡಿ ಕಾರ್ಮಿಕರ ಕೂಲಿಯ ಅಧಿಸೂಚನೆ ಪ್ರಕಟಿಸಿತ್ತು. ಸಾವಿರ ಬೀಡಿಗೆ 210 ರೂ.ನಂತೆ ಹಾಗೂ ಬೆಲೆ ಏರಿಕೆ ಸೂಚ್ಯಂಕದ ಪಾಯಿಂಟ್ಗೆ 0.04 ಪೈಸೆಯಂತೆ ತುಟ್ಟಿ ಭತ್ತೆ ಸೇರಿ ಕನಿಷ್ಠ ಕೂಲಿಯನ್ನು ಬೀಡಿ ಕಾರ್ಮಿಕರಿಗೆ ನೀಡಬೇಕಿತ್ತು. ಇದಕ್ಕೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿತ್ತಾದರೂ ಬೀಡಿ ಮಾಲೀಕರು ಹೈಕೋರ್ಟ್ನಿಂದ ತಡೆಯಾಜ್ಞೆ ತಂದು ಕಳೆದ 6 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕಾನೂನು ಬದ್ದ ಕೂಲಿ ನೀಡದೆ ಸತಾಯಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದರು.
2025ರ ಫೆಬ್ರವರಿ ತಿಂಗಳಲ್ಲಿ ಕನಿಷ್ಠ ಕೂಲಿಯನ್ನು ರಾಜ್ಯ ಸರಕಾರ ಅಧಿಸೂಚನೆ ಮೂಲಕ ಪ್ರಕಟಿಸಿತ್ತು. ಕನಿಷ್ಠ ಕೂಲಿ ನಿಗದಿಗೆ ಕಾಯಿದೆ ಅನ್ವಯ ಸೆಕ್ಷನ್ 5 (1ಎ) ಅನ್ವಯ ಸಮಿತಿ ರಚಿಸಿತ್ತು. ಈ ಸಮಿತಿಯ ಬಹುಮತದ ತೀರ್ಮಾನದಂತೆ 2024ರ ಏಪ್ರಿಲ್ 1ರಿಂದ ಸಾವಿರ ಬೀಡಿಗೆ 301.91 ರೂ. ನಂತೆ ಬೀಡಿ ಕಾರ್ಮಿಕರಿಗೆ ಮಾಲೀಕರು ವೇತನ ವಿತರಿಸಬೇಕು. ಆದರೆ ಮಾಲೀಕರು ಕೇವಲ 284.88 ರೂ.ರಂತೆ ನೀಡುತ್ತಿದ್ದಾರೆ. ಬೀಡಿ ಮಾಲೀಕರು ರಾಜ್ಯ ಸರಕಾರ ನಿಗದಿಗೊಳಿಸಿರುವ ಕನಿಷ್ಠ ಕೂಲಿ ಸಾವಿರ ಬೀಡಿಗೆ 301.92 ರೂ. ನೀಡಬೇಕಾಗಿರುವ ಈ ವಿಷಯವನ್ನು ಐವನ್ ಡಿಸೋಜಾ ಅವರು ಶೂನ್ಯ ವೇಳೆಯಲ್ಲಿ ಸಭಾಪತಿ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಒಂದು ತಿಂಗಳ ಒಳಗೆ ಕನಿಷ್ಠ ವೇತನ ನಿಗದಿ ಮಾಡುವುದಾಗಿ ಭರವಸೆ ನೀಡಿದರು.
ಒಂದೊಮ್ಮೆ ಸಚಿವರ ಭರವಸೆಯಂತೆ ಕನಿಷ್ಠ ಕೂಲಿ ನಿಯಮ ಜಾರಿಗೆ ಬಂದಲ್ಲಿ ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ ಸುಮಾರು 17 ರೂ.ನಷ್ಟು ಹೆಚ್ಚುವರಿ ಮಜೂರಿ ದೊರೆಯಲಿದೆ.

