ಬೆಳ್ತಂಗಡಿ, ಜು. 04 : ತಾಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿನ ಸರ್ವರ್ ಸಮಸ್ಯೆಗೆ ಜನರು ಹಿಡಿಶಾಪ ಹಾಕುವಂತಿದೆ. ಭೂ ಕಿಯೋಸ್ಕ್ ನ ಸೇವೆಗಳನ್ನು ಪಡೆದುಕೊಳ್ಳಲು ಗ್ರಾಮೀಣ ಭಾಗದಿಂದ ರೈತರು ತಾಲೂಕು ಕಚೇರಿಗೆ ಆಗಮಿಸಿದರೆ ಅಲ್ಲಿ “ತಾಂತ್ರಿಕ ಕಾರಣಗಳಿಂದ ಅರ್ಜಿ ಕಿಯೋಸ್ಕ್ ನಲ್ಲಿ ಅರ್ಜಿ ಸ್ವೀಕೃತಿ ಮತ್ತು ಪಹಣಿ ವಿತರಣೆ ಇರುವುದಿಲ್ಲ” ಎಂಬ ನೋಟೀಸ್ ಕಂಡು ಕಂಗಾಲಾಗಿದ್ದಾರೆ.

ಇದು ಒಂದೆರಡು ದಿನದ ಸಮಸ್ಯೆಯಲ್ಲಿ ಕಳೆದ ಹಲವಾರು ದಿನಗಳಿಂದ ಇದೇ ಸಮಸ್ಯೆ ಎಂದು ಸಾರ್ವಜನಿಕರು ದೂರಿದ್ದಾರೆ. ಜೂನ್ 30ರಂದು ಭೂ ಕಿಯೋಸ್ಕ್ ಸೇವೆಗಾಗಿ ನಾವು ಆಗಮಿಸಿದ್ದೆವು ಆದರೆ ಆ ದಿನದಂದು ಜುಲೈ 02ರವರೆಗೆ ತಾಂತ್ರಿಕ ಕಾರಣಗಳಿದೆ ಎಂದು ನಮೂದಿಸಲಾಗಿತ್ತು. ಜುಲೈ 02ರಂದು ಮತ್ತೆ ಆಗಮಿಸಿದಾಗ ಜು. 04ರವರೆಗೆ ಎಂದು ಮತ್ತೆ ನೋಟೀಸ್ ಹಾಕಲಾಗಿದೆ. ಜುಲೈ 05ರಂದು ಆದಿತ್ಯವಾರ. ಜುಲೈ 06ರಂದು ಮತ್ತೆ ತಾಂತ್ರಿಕ ಸಮಸ್ಯೆ ಪರಿಹಾರ ಕಾಣುತ್ತೆ ಅನ್ನುವ ಗ್ಯಾರಂಟಿಯಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕಂದಾಯ ಇಲಾಖೆ ಅಥವಾ ಇನ್ನಿತರ ಸರ್ವರ್ ಸಮಸ್ಯೆಗಳು ಕೇವಲ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರವಲ್ಲ. ಇಡೀ ರಾಜ್ಯದಾದ್ಯಂತ ತಲೆದೋರಿದೆ. ಹೀಗಾಗಿ ರಾಜ್ಯ ಸರ್ಕಾರ ಆದಷ್ಟು ಶೀಘ್ರವಾಗಿ ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಇನ್ನು, ತಹಶಿಲ್ದಾರ್ ಸೇವೆ ಕೂಡಾ ಬೆಳ್ತಂಗಡಿಯ ಜನತೆಗೆ ಸೂಕ್ತ ಸಮಯದಲ್ಲಿ ಸಿಗುತ್ತಿಲ್ಲ ಎನ್ನುವ ಆರೋಪ ಕೂಡಾ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ತಹಶಿಲ್ದಾರ್ ಅವರನ್ನು ಸಂಪರ್ಕಿಸಲು ಧ್ವನಿ ನ್ಯೂಸ್ ಚಾನೆಲ್ ಸಿಬ್ಬಂದಿಗಳು ಕರೆ ಮಾಡಿದರೂ ತಹಶಿಲ್ದಾರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.


