ಪಾಟ್ನಾ: ದೇಶದ ಗಮನಸೆಳೆದಿರುವ ಬಿಹಾರ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಇಂದು ಹೊರಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಪ್ರಾಥಮಿಕ ಹಂತದಲ್ಲಿ ಎನ್ ಡಿಎ ಮೈತ್ರಿಕೂಟ ಭಾರಿ ಮುನ್ನಡೆಯನ್ನು ಸಾಧಿಸಿದೆ. ಕಳೆದೆರಡು ದಶಕಗಳಿಂದ ಸಿಎಂ ಆಗಿರುವ ನಿತೀಶ್ ಕುಮಾರ್ ಅವರ ಆಡಳಿತ ಮತ್ತೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಎನ್ ಡಿಎ ಭರ್ಜರಿ ಮುನ್ನಡೆ ಸಾಧಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದು, ಇದೀಗ ಮ್ಯಾಜಿಕ್ ನಂಬರ್ ದಾಟಿ ಮುನ್ನಡೆಯನ್ನು ಸಾಧಿಸಿಕೊಂಡಿದೆ. ಹೀಗಾಗಿ ಬಿಹಾರದಾದ್ಯಂತ ಭರ್ಜರಿ ವಿಜಯೋತ್ಸವಕ್ಕೆ ಎನ್ ಡಿಎ ಮೈತ್ರಿಕೂಟ ಭರದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಪಾಟ್ನಾದಲ್ಲಿ ಲಡ್ಡು ಮತ್ತು ಬೃಹತ್ ಔತಣಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಸಿಂಗ್ ಕಲ್ಲೂ ಅವರು 500 ಕಿಲೋಗ್ರಾಂಗಳಷ್ಟು ಲಡ್ಡುಗಳಿಗೆ ಆರ್ಡರ್ ಮಾಡಿದ್ದಾರೆ. ದೊಡ್ಡ ಅಡುಗೆ ಪಾತ್ರೆಯ ಮುಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಿತ್ರಗಳನ್ನು ಇರಿಸಲಾಗಿದ್ದು, ಅದರಲ್ಲಿ ಲಡ್ಡು ತಯಾರಿಸಲಾಗುತ್ತಿದೆ. ಹಬ್ಬದ ವಾತಾವರಣದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಅನಂತ್ ಸಿಂಗ್ ಕುಟುಂಬವು ಪಾಟ್ನಾದಲ್ಲಿ ಸುಮಾರು 50 ಸಾವಿರ ಜನರಿಗೆ ಅದ್ಧೂರಿ ಔತಣಕೂಟ ಆಯೋಜಿಸುತ್ತಿದೆ. ಅವರ ಪತ್ನಿ ನೀಲಂ ದೇವಿ ಅವರ ನಿವಾಸದಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಅಲ್ಲಿ ಕಾರ್ಮಿಕರು ಬೃಹತ್ ಸಭೆಗಾಗಿ ತಯಾರಿಯಲ್ಲಿ ತೊಡಗಿದ್ದಾರೆ. ವರದಿಗಳ ಪ್ರಕಾರ ಐದು ಲಕ್ಷ ಗುಲಾಬ್ ಜಾಮೂನ್ ಮತ್ತು ರಸಗುಲ್ಲಾಗಳನ್ನು ತಯಾರಿಸಲಾಗುತ್ತಿದೆ.

