ಬೆಳ್ತಂಗಡಿ, ಡಿ. 17 : ಬೆಳ್ತಂಗಡಿಯಲ್ಲಿ ಬಹಳ ಅದ್ಧೂರಿ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಂಡಿದ್ದ, ಬಹುಬೇಡಿಕೆಯ ಇಂದಿರಾ ಕ್ಯಾಂಟೀನ್ ಗೆ ಈಗ ಗ್ರಹಣ ಹಿಡಿದಿದೆ. ಡಿ. 15 ಹಾಗೂ ಡಿ. 16ರಂದು ಕಾರ್ಮಿಕರು ಕೆಲಸ ಮಾಡದ ಕಾರಣದಿಂದಾಗಿ ಇಂದಿರಾ ಕ್ಯಾಂಟೀನ್ ಅನ್ನು ಬಂದ್ ಮಾಡುವ ದುಸ್ಥಿತಿ ಎದುರಾಗಿತ್ತು. ಇಂದು ಮತ್ತೆ ಕಾರ್ಯಾರಂಭಗೊಂಡಿದೆ ಎಂದು ಇಂದಿರಾ ಕ್ಯಾಂಟೀನ್ ನೌಕರರು ಮಾಹಿತಿ ಧ್ವನಿ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್ ಅನ್ನು ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಉದ್ಘಾಟಿಸಿದ್ದರು. ಉದ್ಘಾಟನೆಗೂ ಮುನ್ನವೇ ಇಂದಿರಾ ಕ್ಯಾಂಟೀನ್ ಸೋರುತ್ತಿದ್ದು ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿತ್ತು. ಆ ಬಳಿಕ ಪೂರಕ ವ್ಯವಸ್ಥೆ ಮಾಡಿಕೊಂಡು, ಬಹಳ ಗ್ರ್ಯಾಂಡ್ ಆಗಿಯೇ ಉದ್ಘಾಟನೆಗೊಂಡಿತ್ತು. ಆದರೆ, ಕ್ಯಾಂಟೀನ್ ಆರಂಭವಾದ ತಿಂಗಳಿನಿಂದ ಇಲ್ಲಿಯವರೆಗೆ ನೌಕರರಿಗೆ ಸಂಬಳ ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕಾರಣದಿಂದಲೇ ನೌಕರರು ಕೆಲಸ ಮಾಡಲು ಹಿಂದೇಟು ಹಾಕಿದ್ದರು. ಇದರಿಂದಾಗಿ ಜನರಿಗೆ ಇಂದಿರಾ ಕ್ಯಾಂಟೀನ್ ಸೇವೆ ಎರಡು ದಿನ ಲಭ್ಯವಾಗಿರಲಿಲ್ಲ. ಆದರೆ, ಇಂದು ಮತ್ತೆ ಕಾರ್ಯಾರಂಭಗೊಂಡಿದ್ದು, ಎಷ್ಟು ದಿನ ಸೇವೆ ಸಿಗಲಿದೆ ಎಂಬ ಖಚಿತತೆ ಇಲ್ಲ.
ಗುತ್ತಿಗೆ ದಾರರು ಮತ್ತು ಜಿಲ್ಲಾಡಳಿತದ ನಡುವಿನ ಗೊಂದಲದಿಂದ ಸಮಸ್ಯೆ ನಿರ್ಮಾಣವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಒಟ್ಟಾರೆಯಾಗಿ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್ ಮೂರೇ ತಿಂಗಳಲ್ಲಿ ಬಂದ್ ಆಗುವ ಮಟ್ಟಕ್ಕೆ ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

