ಕಾರ್ಕಳ, ಮಾ. 06 : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಕೇವಲ ಹೊಸ ಹೊಸ ಪದಪುಂಜಗಳ ಆಟವಾಗಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು “ಬೃಹತ್ ಶೂನ್ಯ” ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯನವರು ಹೆಮ್ಮೆಯಿಂದ ಹೇಳಿಕೊಂಡಿರುವ “11G” ಮಾದರಿಯ ಬಜೆಟ್ ವಾಸ್ತವದಲ್ಲಿ ಇಲಾಖಾವಾರು ವಿಶ್ಲೇಷಣೆ ನಡೆಸಿದಾಗ “11 ಲೈ” (ಹನ್ನೊಂದು ಸುಳ್ಳು)ಗಳ ಬಜೆಟ್ ಆಗಿ ಕಂಡುಬರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ 1,32,000 ಕೋಟಿ ರೂ. ಸಾಲ ಮಾಡುವ ಮೂಲಕ ಒಟ್ಟು ಹೊಣೆಗಾರಿಕೆಯನ್ನು 8,24,389 ಕೋಟಿ ರೂ.ಗೆ ಏರಿಸಿರುವುದು ಕಳವಳಕಾರಿ ಸಂಗತಿಯಾಗಿದ್ದು, ಬಂಡವಾಳ ವೆಚ್ಚವನ್ನು ಕಡಿತಗೊಳಿಸಿರುವುದು ರಾಜ್ಯದ ದೂರಗಾಮಿ ಭವಿಷ್ಯಕ್ಕೆ ಮಾರಕವಾಗಿದೆ. ಈ ಬಜೆಟ್ ಸಂಪೂರ್ಣ ಕರಾವಳಿ ವಿರೋಧಿಯಾಗಿದ್ದು, ಹೊಸ ವೈದ್ಯಕೀಯ ಕಾಲೇಜು, ಪಶ್ಚಿಮ ವಾಹಿನಿ ಯೋಜನೆ ಹಾಗೂ ಪ್ರತ್ಯೇಕ ಕೈಗಾರಿಕಾ ಕ್ಲಸ್ಟರ್ಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ನಗರಾಭಿವೃದ್ಧಿ ಯೋಜನೆಗಳು ಬೆಂಗಳೂರು ದಾಟಿ ಹೊರಬರದಿರುವುದು ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಘೋಷಣೆಯ ಬದ್ಧತೆಯನ್ನು ಪ್ರಶ್ನಿಸುವಂತಿದೆ ಎಂದರು.
ಒಟ್ಟಾರೆಯಾಗಿ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ ಕೇವಲ ಜನಪ್ರಿಯತೆಗಾಗಿ ಮಾಡುವ ‘ಪ್ಲೇಯಿಂಗ್ ಟು ದಿ ಗ್ಯಾಲರಿ’ (Playing to the gallery) ಪ್ರಯತ್ನವಾಗಿದೆ ಎಂದು ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

