ಬೆಳ್ತಂಗಡಿ, ಫೆ. 13 : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತ ಎಂದು ಪರಿಗಣಿಸುವಂತೆ ಕ್ಷೇತ್ರದ ಪರವಾಗಿ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ತಂಡ ಸಲ್ಲಿರುವ ಅರ್ಜಿ ಮತ್ತು ಧರ್ಮಸ್ಥಳ ಕ್ಷೇತ್ರದ ಪರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಪರ ಹಿರಿಯ ನ್ಯಾಯವಾದಿ ದೊರೆರಾಜು ನೇತೃತ್ವದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದ ಮುಂದಿನ ವಿಚಾರಣೆ ಮಾ.5ಕ್ಕೆ ಮುಂದೂಡಿಕೆಯಾಗಿದೆ.
ಧರ್ಮಸ್ಥಳ ಪರ ವಕೀಲ ಸಿ.ವಿ.ನಾಗೇಶ್ ಮತ್ತು ಎಸ್ಐಟಿ ಪರ ನ್ಯಾಯವಾದಿ ದಿವ್ಯರಾಜ್ ಹೆಗ್ಡೆ ಅವರ ವಾದವನ್ನು ನ್ಯಾಯಾಲಯ ಆಲಿಸಿತ್ತು. ಧರ್ಮಸ್ಥಳ ದೇಗುಲದ ಪರ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲ ವಿಜಯ ವಾಸು ಪೂಜಾರಿ ಅವರು ವಾದ ಮಂಡಿಸಲು ಮುಂದಾಗಿದ್ದರಾದರೂ ಅವರಿಗೆ ಕಾಲಾವಕಾಶ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಫೆ.6ಕ್ಕೆ ವಿಚಾರಣೆ ಮುಂದೂಡಲ್ಪಟ್ಟಿತ್ತು. ಫೆ.5ರಂದು ನ್ಯಾಯಾಲಯದಲ್ಲಿ ಈ ಕುರಿತು ಯಾವುದೇ ಪರ-ವಿರೋಧ ವಾದ ಮಂಡನೆ ನಡೆದಿಲ್ಲ. ಮುಂದಿನ ವಿಚಾರಣೆ ಮಾ.5ಕ್ಕೆ ಮುಂದೂಡಲ್ಪಟ್ಟಿದೆ.

