ಬಂಟ್ವಾಳ, ಏ. 17 : ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು 18 ಗ್ರಾಮ್ ತೂಕದ ಚಿನ್ನದ ಸರ ಕಳವಾಗಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಸರಸ್ವತಿ ಎಂಬವರು ತನ್ನ ಮಗಳೊಂದಿಗೆ ಮಡಂತ್ಯಾರಿನಿಂದ ಪೊಳಲಿಗೆ ಹೋಗಲು ಧರ್ಮಸ್ಥಳ ದಿಂದ ಸ್ಟೇಟ್ ಬ್ಯಾಂಕಿಗೆ ಹೋಗುವ ಬಸ್ಸಿನಲ್ಲಿ ಏ.15ರಂದು ಬೆಳಗ್ಗೆ ಸುಮಾರು 8.20ಕ್ಕೆ ಹತ್ತಿದ್ದರು. ಬಸ್ ನಲ್ಲಿ ಜನಸಂದಣಿ ಇದ್ದು, ಮಗಳು ಕುಳಿತಿದ್ದರೆ, ಮಹಿಳೆ ನಿಂತು ಪ್ರಯಾಣಿಸಿದ್ದರು.
ಮಗಳೊಂದಿಗೆ ಬಿ.ಸಿ.ರೋಡಿನಲ್ಲಿ ಇಳಿಯುವ ವೇಳೆ ಸುಮಾರು 9 ಗಂಟೆಗೆ ಕುತ್ತಿಗೆ ನೋಡಿದ್ದು, ಈ ವೇಳೆ ಚಿನ್ನದ ಸರ ಇರಲಿಲ್ಲ. ಬಸ್ಸಿನಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಯಾರೋ ಕಳ್ಳರು ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಮಡಂತ್ಯಾರುನಿಂದ ಬಿ.ಸಿ ರೋಡ್ ಗೆ ಬರುವ ಸಮಯ ಬಸ್ಸಿನಲ್ಲಿ ಕಳ್ಳತನ ಮಾಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಕಳ್ಳತನವಾದ ಚಿನ್ನದ ಅಂದಾಜು ಮೌಲ್ಯ ಸುಮಾರು 2,50,000 ಆಗಬಹುದು ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

