ಬೆಂಗಳೂರು, ಮಾ. 24 : ಕಳೆದ ವರ್ಷ ಐಪಿಎಲ್ ಟ್ರೋಫಿ ವಿಜಯೋತ್ಸವದ ಸಮಯದಲ್ಲಿ ನಡೆದ ಭೀಕರ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುವ ಕಾರ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ಹೆಜ್ಜೆ ಮುಂದಿಟ್ಟಿದೆ. ಕಾಲ್ತುಳಿತದಲ್ಲಿ ಮಡಿದವರ ಗೌರವಾರ್ಥವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11 ಸೀಟುಗಳನ್ನು ಖಾಲಿ ಇಡಲಾಗುವುದು ಎಂದು ಆರ್ಸಿಬಿ ಸಿಇಒ ರಾಜೇಶ್ ಮೆನನ್ ಹೇಳಿದ್ದಾರೆ.
ಋತುವಿನ ಉದ್ದಕ್ಕೂ ಅಭ್ಯಾಸದ ಸಮಯದಲ್ಲಿ ಆರ್ ಸಿಬಿ ಆಟಗಾರರು 11 ನೇ ಸಂಖ್ಯೆಯ ಜೆರ್ಸಿಯನ್ನು ಧರಿಸುತ್ತಾರೆ. ಈ ಆವೃತ್ತಿಯ ಎಲ್ಲಾ ಪಂದ್ಯಗಳಲ್ಲಿ ಕಪ್ಪು ತೋಳುಪಟ್ಟಿಗಳನ್ನು ಧರಿಸುತ್ತಾರೆ ಎಂದು ಮೆನನ್ ಹೇಳಿದರು.
“ಜೂನ್ 4 ರಂದು ನಾವು ಕಳೆದುಕೊಂಡ 11 ಅಭಿಮಾನಿಗಳ ನೆನಪಿಗಾಗಿ, ಆಟಗಾರರು ಅಭ್ಯಾಸಕ್ಕಾಗಿ, ಆಟದ ದಿನದಂದು ಪಂದ್ಯದ ಮೊದಲು ಅಭ್ಯಾಸದ ಸಮಯದಲ್ಲಿ 11 ನೇ ಸಂಖ್ಯೆಯ ಜೆರ್ಸಿಯನ್ನು ಧರಿಸುತ್ತಾರೆ. ಅಭ್ಯಾಸಕ್ಕಾಗಿ ಹಿಂಭಾಗದಲ್ಲಿ 11 ನೇ ಸಂಖ್ಯೆಯ ಜೆರ್ಸಿಯನ್ನು ಹೊಂದಿರುತ್ತಾರೆ. ಪಂದ್ಯದ ವೇಳೆ ಅವರ ನಿರ್ದಿಷ್ಟ ಸಂಖ್ಯೆಯ ಜೆರ್ಸಿ ಧರಿಸುತ್ತಾರೆ” ಎಂದರು.
“ಇದಲ್ಲದೆ, ಆಟಗಾರರು ಕಪ್ಪು ತೋಳುಪಟ್ಟಿಯನ್ನು ಧರಿಸಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶಾಶ್ವತವಾಗಿ 11 ಆಸನಗಳನ್ನು ಖಾಲಿ ಇಡುವ ಬಗ್ಗೆಯೂ ನಾವು ಯೋಚಿಸುತ್ತಿದ್ದೇವೆ. ನಮ್ಮೊಂದಿಗೆ ಶಾಶ್ವತವಾಗಿ ಇರುವ 11 ಅಭಿಮಾನಿಗಳಿಗಾಗಿ ಇದು” ಎಂದು ಮೆನನ್ ಮಂಗಳವಾರ (ಮಾ.24) ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಈ ಋತುವಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಭವಿಷ್ಯದಲ್ಲಿ ಸಂತ್ರಸ್ಥರ ಕುಟುಂಬಗಳಿಗೆ ಇನ್ನೂ ಹೆಚ್ಚಿನದನ್ನು ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸಲಾಗುವುದು ಎಂದು ಮೆನನ್ ಹೇಳಿದರು.

