ಹುಣಸೂರು, ಜೂ. 26 : ಆಹಾರ ಅರಸಿ ಹೆದ್ದಾರಿ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅರಬ್ಬಿತಿಟ್ಟು ವನ್ಯಧಾಮದ ಬಳಿಯ ಹುಣಸೂರು-ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಅರಬ್ಬಿತಿಟ್ಟು ಸಂರಕ್ಷಿತ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಹೆದ್ದಾರಿ ಎದುರಿನ ರಕ್ಷಿತಾರಣ್ಯದ ಕಡೆಗೆ ಚಿರತೆ ರಸ್ತೆ ದಾಟುತ್ತಿದ್ದ ವೇಳೆ ಹುಣಸೂರು ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದೆ.
ಮಾಹಿತಿ ಮೇರೆಗೆ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಡಿಆರ್ಎಫ್ಓ ರಮಣಗೌಡ ಹಾಗೂ ಸಿಬಂದಿಗಳು ದೌಡಾಯಿಸಿ ಪರಿಶೀಲಿಸಿ, ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಬಿಳಿಕೆರೆ ಠಾಣಾ ಪೊಲೀಸರು ಭೇಟಿ ಇತ್ತು ಪರಿಶೀಲಿಸಿದ್ದಾರೆ.


