ಕಾರ್ಕಳ : ನಗರದ ಹಲವು ಭಾಗಗಳಲ್ಲಿ ಬೀದಿನಾಯಿಗಳ ಕಾಟದಿಂದ ಸ್ಥಳೀಯರು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಕಂಗಾಲಾಗಿದ್ದರು. ಆದರೆ, ಕೆಲವು ದಿನಗಳ ಹಿಂದೆ ಚಿರತೆಯೊಂದು ಬೀದಿನಾಯಿಗಳ ಹಿಂಡಿಗೆ ದಾಳಿ ನಡೆಸಿ, ನಾಯಿಯೊಂದನ್ನು ಕೊಂದು ಹಾಕಿತ್ತು. ಆ ಬಳಿಕ ಬೀದಿನಾಯಿಗಳ ಕಾಟ ಸ್ಥಳೀಯವಾಗಿ ತಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬೀದಿ ನಾಯಿ ಕಾಟ ತಪ್ಪಿದ್ದೇನು ನಿಜ ಆದರೆ, ಚಿರತೆ ಆತಂಕವೀಗ ಸ್ಥಳೀಯರನ್ನು ಕಾಡುತ್ತಿದೆ.
ನಗರದ ತೆಳ್ಳಾರು ರಸ್ತೆ ಸೇರಿದಂತೆ ವಿವಿಧ ಜಂಕ್ಷನ್ಗಳಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿತ್ತು. ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು, ಪಾದಚಾರಿಗಳು, ವಿದ್ಯಾರ್ಥಿಗಳು ಹೈರಾಣಾಗಿದ್ದರು. ಆದರೆ, ಚಿರತೆ ದಾಳಿಯ ಬಳಿಕ ಬೀದಿನಾಯಿಗಳ ಕಾಟ ತಪ್ಪಿದ್ದು, ಸದ್ಯ ಚಿರತೆಯ ಆತಂಕದಲ್ಲೇ ಸ್ಥಳೀಯರು ದಿನ ಕಳೆಯುವಂತೆ ಆಗಿದೆ.
ಕಳೆದ ನಾಲ್ಕೈದು ತಿಂಗಳ ಹಿಂದೆ ರಾಮಸಮುದ್ರದ ಪರಿಸರ, ಬಂಡಿಮಠ, ಪೆರ್ವಾಜೆ, ಶ್ರೀ ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ ಚಿರತೆ ಉಪಟಳವಿತ್ತು. ಅಲ್ಲದೆ ಕಣಜಾರು, ಪಳ್ಳಿ, ನೀರೆ ಬೈಲೂರು, ಕೌಡೂರು, ಯರ್ಲಪಾಡಿ, ಕಾಂತಾವರ, ಬೆಳ್ಳಣ್, ಮುಡಾರು, ಮುಂಡ್ಲಿ ಕೆರ್ವಾಶೆ, ಹೆಬ್ರಿ ತಾಲೂಕಿನ ವರಂಗ, ಮುನಿಯಾಲು, ಅಂಡಾರು ಪರಿಸರದಲ್ಲಿ ಆಗೊಮ್ಮೆ ಈಗೊಮ್ಮೆ ಚಿರತೆಗಳು ಕಾಣಸಿಗುವುದು ಸಾಮಾನ್ಯವಾಗಿದೆ. ಜಾನುವಾರು, ನಾಯಿ, ಬೆಕ್ಕುಗಳ ಬೇಟೆಗಾಗಿ ಚಿರತೆಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಆದಷ್ಟು ಶೀಘ್ರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

