ಬೆಂಗಳೂರು, ಜೂ. 03 : ಕರ್ನಾಟಕದ 24 ನೇ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಲೋಕಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
4.15 ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಪ್ರಮಾಣ ವಚನ ಬೋಧಿಸಿದರು. ಇದಕ್ಕೆ ಮೊದಲು ಅಜ್ಜಯ್ಯನ ಫೋಟೋಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು.
ನಾಡಗೀತೆ ಅರ್ಧದಲ್ಲಿ ಮೊಟಕು !
ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ವಂದೇ ಮಾತರಂ ನುಡಿಸುವ ಮೊದಲು ನಾಡಗೀತೆ ನುಡಿಸಲಾಯಿತು. ಆದರೆ ನಾಡ ಗೀತೆಯನ್ನು ಕೂಡಲೇ ಮೊಟಕುಗೊಳಿಸಿ ವಂದೇ ಮಾತರಂ ನುಡಿಸಲಾಯಿತು. ಬಳಿಕ ರಾಷ್ಟ್ರಗೀತೆ ನುಡಿಸಲಾಯಿತು. ಕೊನೆಯಲ್ಲಿ ಮತ್ತೆ ನಾಡಗೀತೆ ನುಡಿಸಲಾಯಿತು.
ವೇದಿಕೆಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಹಾಗೂ ಮತ್ತಿತರರು ಹಾಜರಿದ್ದರು.
ರೇಷ್ಮೆ ಪಂಚೆ ಶಲ್ಯ ಮೂಲಕ ಗಮನ ಸೆಳೆದ ಸಿಎಂ
24 ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಡಿಕೆ ಶಿವಕುಮಾರ್ ಅವರು ರೇಷ್ಮೆ ಪಂಚೆ ಹಾಗೂ ರೇಷ್ಮೆ ಶಲ್ಯ ಧರಿಸಿ ಗಮನ ಸೆಳೆದರು. ಡಿಕೆ ಶಿವಕುಮಾರ್ ಅವರು ಈ ಹಿಂದೆ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲೂ ಇದೇ ರೀತಿಯ ವಸ್ತ್ರದಲ್ಲಿ ಗಮನ ಸೆಳೆದಿದ್ದರು.
ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ತೆಲಂಗಾಣ ಪಿಎಂ ರೇವಂತ ರೆಡ್ಡಿ, ಕೇರಳ ಸಿಎಂ ಸತೀಶನ್, ಹಿಮಾಲಯ ಪ್ರದೇಶ ಸಿಎಂ ಸುಕ್ವಿಂದರ್ ಸಿಂಗ್ ಸುಕು ಹಾಗೂ ಪ್ರಮುಖರು ಭಾಗಿಯಾಗಿದ್ದರು.

