ರಾಯಚೂರು, ಫೆ. 09 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಿಕ್ಕು ತಪ್ಪಿ ನಿಗದಿತ ಹೆಲಿಪ್ಯಾಡ್ ಬದಲು ಮತ್ತೊಂದು ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ. ಲಿಂಗಸೂಗೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಸಿಎಂ ಸ್ವಾಗತಕ್ಕೆ ಸಿದ್ಧರಾಗಿದ್ದ ಅಧಿಕಾರಿಗಳು ಕ್ಷಣಕಾಲ ಗೊಂದಲಕ್ಕೀಡಾದರು.
ಲಿಂಗಸೂಗೂರಿಗೆ ಆಗಮಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ನಿಗದಿಯಾಗಿದ್ದ ಹೆಲಿಪ್ಯಾಡ್ನಲ್ಲಿ ಇಳಿಯದೇ, ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಖಾಸಗಿ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಸಿಎಂ ಸ್ವಾಗತಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ನಿಗದಿತ ಸ್ಥಳದಲ್ಲಿ ಕಾಯುತ್ತಿದ್ದು, ಹೆಲಿಕಾಪ್ಟರ್ ಬೇರೆ ಕಡೆ ಇಳಿದ ಸುದ್ದಿ ತಿಳಿದ ತಕ್ಷಣ ಓಡೋಡಿ ಆಗಮಿಸಿದರು.
ಈ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ. ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಮೊಮ್ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಲಿಂಗಸೂಗೂರಿಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ರಸ್ತೆಯ ಶ್ರೀನಿವಾಸ್ ಲೇಔಟ್ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಗಾಗಿ ವಿಶೇಷವಾಗಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಇದೇ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಆಗಮಿಸಿದ್ದು, ಅವರು ಇಳಿದಿದ್ದ ಹೆಲಿಪ್ಯಾಡ್ನಲ್ಲೇ ಸಿಎಂ ಹೆಲಿಕಾಪ್ಟರ್ ಕೆಲವೇ ನಿಮಿಷಗಳಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಅಷ್ಟರಲ್ಲೇ ಸಿಎಂ ಇದ್ದ ಹೆಲಿಕಾಪ್ಟರ್ ದಿಕ್ಕು ಬದಲಿಸಿ ಮತ್ತೊಂದು ಹೆಲಿಪ್ಯಾಡ್ ಕಡೆಗೆ ತೆರಳಿದೆ.
ಈ ಹಿನ್ನೆಲೆಯಲ್ಲಿ, ಡಿಸಿಎಂ ಈಗಾಗಲೇ ನಿಗದಿತ ಹೆಲಿಪ್ಯಾಡ್ನಲ್ಲಿ ಇದ್ದ ಕಾರಣ ಬೇರೆ ಹೆಲಿಪ್ಯಾಡ್ನಲ್ಲಿ ಇಳಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೂಚಿಸಿದ್ದರೇ ಎಂಬ ಚರ್ಚೆಯೂ ಸ್ಥಳದಲ್ಲಿ ನಡೆಯಿತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

