ಬೆಂಗಳೂರು, ಡಿ. 12 : ತುಳುನಾಡು ದೈವದ ನೆಲೆವೀಡು. ಇಲ್ಲಿ, ದೈವರಾಧನೆಗೆ ಬಹಳಷ್ಟು ಮಹತ್ವವಿದೆ. ಆದರೆ, ಯಾವತ್ತು ಸಿನಿಮಾಗಳು ಇಲ್ಲಿನ ದೈವರಾಧನೆಯನ್ನು ಆಡಂಬರವಾಗಿ ತೋರಿಸಿ ಬಿಟ್ಟಿತೋ ಅಂದಿನಿಂದ ದೈವಾರಾಧನೆಯ ಶ್ರೇಷ್ಠತೆಗೆ ಪೆಟ್ಟು ಬೀಳುತ್ತಲೇ ಇದೆ. ಹಲವಾರು ಮಂದಿ ದೈವದ ವೇಷ ತೊಟ್ಟು ರೀಲ್ಸ್ ಮಾಡಿ ಆಯ್ತು, ಛದ್ಮವೇಷ ತೊಟ್ಟು ಕುಣಿದರು, ವೇದಿಕೆಯಲ್ಲಿ ದೈವರಾಧನೆಯನ್ನು ಕೆಳಮಟ್ಟದಲ್ಲಿ ತೋರಿಸಿದ್ದೂ ಆಯ್ತು. ಆದರೆ, ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಕೇಕ್ ನಲ್ಲಿ ದೈವವನ್ನು ಚಿತ್ರಿಸುವ ಮೂಲಕ ಮಾನಸಿಕ ಕೀಳರಿಮೆಯನ್ನು ಕೆಲವರು ಪ್ರದರ್ಶಿಸಿದ್ದಾರೆ. ಸಿನಿಮಾಗಳು ಆ ದೈವರಾಧನೆಯ ಶ್ರೇಷ್ಠತೆಯನ್ನು ಹಾಳುಗೆಡವಿದೆ ಎನ್ನುವ ಆರೋಪ ಬಹಳಷ್ಟು ಚರ್ಚೆಯಲ್ಲಿರುವಾಗಲೇ ಇದೀಗ ಮತ್ತೊಮ್ಮೆ ತುಳುವರ ದೈವಾರಾಧನೆಯ ನಂಬಿಕೆಗೆ ಪೆಟ್ಟು ಬಿದ್ದಿದೆ.

ಹೌದು, ಬೆಂಗಳೂರಿನಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಡಿಸೆಂಬರ್ ೧೧ರಿಂದ ಜನವರಿ ೦೪ರವರೆಗೆ ನಡೆಯುತ್ತಿರುವ ೫೧ನೇ ವರ್ಷದ ಬೃಹತ್ ಕೇಕ್ ಪ್ರದರ್ಶನದಲ್ಲಿ ದೈವರಾಧನೆಗೆ ಕಳಂಕ ತರಲಾಗಿದೆ. ಈ ಕೇಕ್ ಪ್ರದರ್ಶನದಲ್ಲಿ ದೈವದ ಚಿತ್ರಣವನ್ನು ಕೇಕ್ ನಲ್ಲಿ ಬಿಡಿಸಲಾಗಿರುವುದು ವಿಪರ್ಯಾಸ. ತುಳುನಾಡಿನ ಆರಾಧನೆಯ ಭಾಗವಾಗಿರುವ ದೈವರಾಧನೆಯನ್ನು ಕೆಳಮಟ್ಟದಲ್ಲಿ ಬಿಂಬಿಸುತ್ತಿರುವುದು ಕೆಲವರಿಗೆ ಚಾಲಿಯಾಗಿಬಿಟ್ಟಿದೆ. ತುಳುನಾಡಿನಾದ್ಯಂತ ಇದೀಗ ಈ ಕೇಕ್ ಚಿತ್ರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರದರ್ಶನಕ್ಕಿಟ್ಟಿರುವ ಈ ಕೇಕ್ ಅನ್ನು ಆದಷ್ಟು ಶೀಘ್ರವಾಗಿ ತೆರವು ಮಾಡಿ, ತುಳುವರ ಕ್ಷಮೆಯಾಚಿಸಬೇಕು ಎಂಬ ಕೂಗು ಕೂಡಾ ಕೇಳಿ ಬರುತ್ತಿದೆ. ಪದೇ, ಪದೇ ತುಳುನಾಡಿನ ಶ್ರೇಷ್ಠ ನಂಬಿಕೆಯನ್ನು ಹಾಳು ಮಾಡುತ್ತಿರುವವರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಬೇಕಾದ ಅನಿವಾರ್ಯತೆ ತುಳುನಾಡಿಗೆ ಬಂದೊದಗಿದೆ ಎನ್ನುವ ಮಾತುಗಳು ಕೂಡಾ ಕೇಳಿ ಬರುತ್ತಿದೆ.

