ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವು ಬಹಳ ವಿಜ್ರಂಭಣೆಯಿಂದ ಜರುಗುತ್ತಿದೆ. ನ. 15ರಿಂದ ಆರಂಭಗೊಂಡ ಈ ಲಕ್ಷದೀಪೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಇಂದು ಶ್ರೀ ಮಂಜುನಾಥ ಸ್ವಾಮಿಯ ಗೌರಿಮಾರು ಕಟ್ಟೆ ಉತ್ಸವ ನಡೆಯಲಿದ್ದು, ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ. ಬೆಳ್ಳಿ ರಥದಲ್ಲಿ ವಿರಾಜಮಾನನಾದ ಶ್ರೀ ಮಂಜುನಾಥ ಸ್ವಾಮಿಯು ರಥಬೀದಿಯಲ್ಲಿ ಸಾಗಿ ಬಂದು ಗೌರಿಮಾರು ಕಟ್ಟೆಯಲ್ಲಿ ವಿಶೇಷ ಉತ್ಸವದೊಂದಿಗೆ ಲಕ್ಷಾಂತರ ಮಂದಿ ಭಕ್ತರ ಭಕ್ತಿಗೆ ಒಲಿದು ದರ್ಶನ ನೀಡಲಿದ್ದಾರೆ.
ಇನ್ನು, ಸಂಜೆ 05:00 ಗಂಟೆಯಿಂದ ಕ್ಷೇತ್ರದ ಅಮೃತವರ್ಷಿಣಿ ಸಭಾ ಭವನದಲ್ಲಿ 93ನೇ ಸಾಹಿತ್ಯ ಸಮ್ಮೇಳನವು ಜರುಗಲಿದೆ. ಸಾಹಿತ್ಯ ಸಮ್ಮೇಳನದ ಬಳಿಕ ಅದೇ ವೇದಿಕೆಯಲ್ಲಿ ರಾತ್ರಿ ಗಂಟೆ 08:30ರಿಂದ ಬೆಂಗಳೂರಿನ ರಾಹುಲ್ ವೆಲ್ಲಾಲ್ ಮತ್ತು ತಂಡದಿಂದ ಸಂಗೀತ ಸಂಜೆ ಹಾಗೂ ರಾತ್ರಿ ಗಂಟೆ 09:45ರಿಂದ ಬಡಗುತಿಟ್ಟು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ದಕ್ಷಯಜ್ಞ” ಎಂಬ ಯಕ್ಷಗಾನವು ಪ್ರದರ್ಶನಗೊಳ್ಳಲಿದೆ. ಅಲ್ಲದೆ, ವಸ್ತುಪ್ರದರ್ಶನದ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ, ವಿಶ್ವಾಭಿಗಮನಮ್, ನೃತ್ಯರೂಪಕ, ಶಿವಾರ್ಪಣಮ್, ಸ್ನೇಹ ಮೆಲೋಡಿಸ್, ಭದ್ರಾವತಿ ತಂಡದಿಂದ ರಸಮಂಜರಿ ಕಾರ್ಯಕ್ರಮವು ಜರುಗಲಿದೆ.

ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ ಹಿರಿಯ ಸಾಹಿತಿಗಳು ಮತ್ತು ಅಂಕಣಕಾರರಾದ ಪ್ರೊ. ಪ್ರೇಮಶೇಖರ ಆಗಮಿಸಲಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಾಣಿ ಮುಖ್ಯಸಂಪಾದಕರಾದ ವಿಶ್ವೇಶ್ವರ ಭಟ್ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಲೇಖಕಿ ಮತ್ತು ಗಮಕ ವ್ಯಾಖ್ಯಾತ್ರಿಯಾಗಿರುವ ಶ್ರೀಮತಿ ಶಾಂತಾ ನಾಗಮಂಗಲ, ವಿವೇಕಹಂಸ ಮಾಸಪತ್ರಿಕೆಯ ಸಂಪಾದಕರು, ಬೆಂಗಳೂರು ಆರ್.ಎಮ್.ಎಸ್. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಆಡಳಿತಾಧಿಕಾರಿಯಾಗಿರುವ ಡಾ. ರಘು ವಿ. ಹಾಗೂ ಸಾಹಿತಿಗಳು ಮತ್ತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾಗಿರುವ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ, ಧಾರವಾಡ ಇವರು ಉಪನ್ಯಾಸ ನೀಡಲಿದ್ದಾರೆ.

