ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವು ಬಹಳ ವೈಭವೋಪೇತವಾಗಿ ಜರುಗುತ್ತಿದೆ. ನಾಲ್ಕನೇ ದಿನವಾದ ಇಂದು (ನ.18) ಅಮೃತವರ್ಷಿಣಿ ಸಭಾಭವನದಲ್ಲಿ 93ನೇ ಅಧಿವೇಶನದ ಸರ್ವಧರ್ಮ ಸಮ್ಮೇಳನವು ಸಂಜೆ 05 ಗಂಟೆಯಿಂದ ನಡೆಯಲಿದೆ.
ಸರ್ವಧರ್ಮ ಸಮ್ಮೇಳನದ ಉದ್ಘಾಟನೆಯನ್ನು ಬೃಹತ್ ಮತ್ತು ಮದ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯಾಭಿವೃದ್ಧಿ ಇಲಾಖೆ ಸಚಿವರಾದ ಡಾ. ಎಂ.ಬಿ. ಪಾಟೀಲ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿಗಳು ಹರಿಹರಪುರ ಇವರು ವಹಿಸಲಿದ್ದಾರೆ. ಉಪನ್ಯಾಸಕರುಗಳಾಗಿ ಬೆಂಗಳೂರು ಪ್ರಜಾವಾಣಿ ಮುಖ್ಯ ಉಪಸಂಪಾದಕರಾಗಿರುವ ಶ್ರೀ ಎಸ್. ಸೂರ್ಯಪ್ರಕಾಶ್ ಪಂಡಿತ್ ಹಾಗೂ ಅಂಕಣಕಾರರು ಮತ್ತು ರಾಷ್ಟ್ರೀಯ ಚಿಂತಕರಾದ ಶ್ರೀ ತನ್ವೀರ್ ಅಹಮ್ಮದ್ ಉಲ್ಲಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.
ಅಮೃತವರ್ಷಿಣಿ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಗಂಟೆ 08:30ರಿಂದ ವಿದುಷಿ ಡಾ. ಶೀಲಾ ಉನ್ನಿಕೃಷ್ಣನ್ ನಿರ್ದೇಶನದ ಶ್ರೀ ದೇವಿ ನೃತ್ಯಾಲಯ ಚೆನ್ನೈ ಇವರಿಂದ ಭರತನಾಟ್ಯವು ನಡೆಯಲಿದೆ. ಅದೇ ರೀತಿಯಲ್ಲಿ ವಸ್ತುಪ್ರದರ್ಶನ ಮಂಟಪದಲ್ಲಿ ತರಂಗ ವಿದ್ವಾನ್ ಎಂ. ಆರ್. ಹನುಮಂತರಾಜು, ಶ್ರೀ ಸರಸ್ವತೀ ವಿದ್ಯಾವೃಂದ, ಮೈಸೂರು ಇವರಿಂದ ಲಯ ನಾದ ಸಂಗೀತ, ಅಶ್ವಿನಿ ಜೆ. ರಾಮನ್, ನಿರ್ದೇಶಕರು, ನೃತ್ತ ನೃತ್ಯಾಲಯ, ಬೆಂಗಳೂರು ಇವರಿಂದ ಶಾಸ್ತ್ರೀಯ ಭರತನಾಟ್ಯ, ವಿದುಷಿ ಕುಮಾರಿ ಸುಪ್ರೀತಾ ಮತ್ತು ತಂಡ, ಧರ್ಮಸ್ಥಳ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಮಂಗಳೂರು ಇವರಿಂದ ಅಮರನಾಥನ ಅಮರ ಕಥೆ ಹಾಗೂ ಕುಮಾರಿ ಸಮನ್ವಿ ಎ. ರೈ, ಪುತ್ತೂರು ಇವರಿಂದ ಸುಗಮ ಸಂಗೀತ ನಡೆಯಲಿದೆ.

