ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ಖ್ಯಾತಿಯನ್ನು ಕ್ಷೀಣಿಸಲು ಕಳೆದ 12 ವರ್ಷಗಳಿಂದ ಷಡ್ಯಂತ್ರ ರೂಪಿಸಲಾಗುತ್ತಿದೆ. ಇದೀಗ ಧರ್ಮಸ್ಥಳದ ನಾನಾ ಕಡೆ ಗುಂಡಿ ತೋಡಿದರೂ ಯಾವುದೇ ಸಾಕ್ಷ್ಯಗಳು ದೊರಕದೆ ಹೋದರು, ಎಸ್ ಐ ಟಿ ವರದಿ ಬಂದ ಮೇಲೆಯೂ ಸರ್ಕಾರ ಹಾಗೂ ಎಸ್ ಐ ಟಿ ಮೌನ ವಹಿಸಿರುವುದು ಸಾರ್ವಜನಿಕರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಧರ್ಮಸ್ಥಳ ಗ್ರಾಮಸ್ಥರಾದ ಶ್ರೀನಿವಾಸ್ ರಾವ್ ಹೇಳಿದರು.
ಸಂತೆಕಟ್ಟೆ ಸುವರ್ಣ ಆರ್ಕೆಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಷಡ್ಯಂತ್ರ ರೂಪಿಸಿದವರನ್ನು ಎಸ್ಐಟಿ ಅವರು ತನಿಖೆಗೆ ಬರುವಂತೆ ಮಾಡಬೇಕು, ಗೃಹ ಮಂತ್ರಿಯವರು ಎಸ್ಐಟಿಯ ಮಧ್ಯಂತರ ವರದಿ ಬಗ್ಗೆ ಮೌನ ವಹಿಸಿರುವುದು ಸಂಶಯಕ್ಕೆ ಮತ್ತಷ್ಟು ಎಡೆ ಮಾಡಿಕೊಟ್ಟಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಸಿರುವ ಷಡ್ಯಂತ್ರವನ್ನು ಪರಿಶೀಲನೆ ಮಾಡುವ ಕೆಲಸ ಆಗಬೇಕು. ಪಾಪದವರಿಗೆ ಒಂದು ಕಾನೂನು, ಷಡ್ಯಂತ್ರಿಗಳಿಗೆ ಒಂದು ಕಾನೂನು, ಎಡಪಂಥೀಯರಿಗೆ ಒಂದು ಕಾನೂನು ಯಾಕೆ?. ಸರ್ಕಾರ ಎಸ್ಐಟಿ ರಚನೆ ಮಾಡಿದಾಗ ನಾವು ಅದನ್ನು ಸ್ವಾಗತಿಸಿದ್ದೆವು.
ಆದರೆ ತನಿಖೆ ನಡೆದು ಇಷ್ಟು ದಿನಗಳಾದರೂ ನಮ್ಮ ನಿರೀಕ್ಷೆಯಂತೆ ಸರ್ಕಾರದಿಂದ ಹಾಗೂ ಎಸ್ಐಟಿಯಿಂದ ಉತ್ತರ ಬಂದಿಲ್ಲ. ಸರ್ಕಾರ, ಎಸ್ಐಟಿ ಇಲಾಖೆ ಮತ್ತು ಪೊಲೀಸ್ ಇಲಾಖೆ ವರದಿಯನ್ನು ಕೂಲಂಕೂಷವಾಗಿ ತನಿಖೆ ಮಾಡಬೇಕು. ಸರ್ಕಾರದ ಮೌನದ ಮೇಲೆ ಎಸ್ಐಟಿ ಮೇಲೆ ಸಾರ್ವಜನಿಕರಿಗೆ ಬಂದಿರುವ ಸಂಶಯವನ್ನು ನಿವಾರಿಸಲು ಆದಷ್ಟು ಬೇಗ ಸತ್ಯಾ ಸತ್ಯತೆಯನ್ನು ಹೊರತರಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಧರ್ಮಸ್ಥಳದ ಚಂದ್ರನ್, ಧರ್ಮಸ್ಥಳ ನಿವಾಸಿ ಹಾಗೂ ವ್ಯಾಪಾರಸ್ಥರಾದ ಧನಕೀರ್ತಿ ಅರಿಗ, ಧರ್ಮಸ್ಥಳ ವಾಹನ ಮಾಲಕ ಚಾಲಕರ ಸಮಿತಿಯ ರಾಜಾರಾಮ್ ಉಪಸ್ಥಿತರಿದ್ದರು. ನೀಲಕಂಠ ಶೆಟ್ಟಿ ಧರ್ಮಸ್ಥಳ ಸ್ವಾಗತಿಸಿದರು.


