ಉಡುಪಿ : ಉಡುಪಿಯ ಶ್ರೀ ಕೃಷ್ಣ ಮತ ಪುತ್ತಿಗೆ ಮಠದ ವತಿಯಿಂದ ಶನಿವಾರ ನಡೆದ ಲಕ್ಷ ಕಂಠ ಗೀತಾ ಪಾರಾಯಣ ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ ತಮ್ಮ ಮಾತು ಆರಂಭಿಸುವ ಮುನ್ನ ಪುಟಾಣಿಗಳು ಬಿಡಿಸಿ ತಂದಿದ್ದ ಆಕರ್ಷಕ ಚಿತ್ರಗಳನ್ನು ಸ್ವೀಕರಿಸಿ ತನಗೊಪ್ಪಿಸಲು ಹೇಳಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಉಡುಪಿಯ ಶಾಲಾಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಅನೇಕ ವಿದ್ಯಾರ್ಥಿಗಳು ಪೋಷಕರೊಂದಿಗೆ ಸಮಾರಂಭಕ್ಕೆ ಆಗಮಿಸಿದ್ದರು. ಆ ಪೈಕಿ ಕೆಲ ಪುಟಾಣಿಗಳು ಶ್ರೀ ಕೃಷ್ಣ, ಪ್ರಧಾನಿ ಮೋದಿ ಅವರ ಆಕರ್ಷಕವಾಗಿ ಬಿಡಿಸಿದ್ದ ಚಿತ್ರಗಳನ್ನು ತಂದಿದ್ದರು. ಮಾತು ಆರಂಭಿಸುತ್ತಲೇ ಪುಟಾಣಿಗಳನ್ನು ಗಮನಿಸಿದ ಪ್ರಧಾನಿ ಮೋದಿ” ನೀವು ತಂದಿರುವ ಚಿತ್ರಗಳ ಹಿಂದೆ ವಿಳಾಸ ಬರೆದು ನನಗೆ ಕೊಡಿ ನಾನು ನಿಮಗೆ ಪ್ರಶಂಸಾ ಪತ್ರ ಕಳುಹಿಸುತ್ತೇನೆ. ನಾನು ಅನಿವಾರ್ಯವಾಗಿ ಕೆಲವು ಬಾರಿ ಅನೇಕರನ್ನು ನಿರಾಶರನ್ನಾಗಿಸಬೇಕಾಗುತ್ತದೆ. SPG ಅಧಿಕಾರಿಗಳು(Special Protection Group) ಆ ಚಿತ್ರಗಳನ್ನು ಪಡೆದು ನನಗೆ ತಲುಪಿಸಿ ಎಂದು ಹೇಳಿದರು. ಈ ವೇಳೆ ಸೇರಿದ್ದ ಸಾವಿರಾರು ಮಂದಿ ಪ್ರಧಾನಿ ಮೋದಿ ಅವರಿಗೆ ಜೈಕಾರ ಹಾಕಿದರು.
ರೋಡ್ ಶೋ ವೇಳೆ ಹೆಬ್ರಿ ಎಸ್.ಆರ್. ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಪರೀಕ್ಷಿತ್ ಆಚಾರ್ ಬಿಡಿಸಿದ ಪ್ರಧಾನಿ ಮೋದಿ ಮತ್ತು ಅವರ ತಾಯಿಯವರ ಭಾವಚಿತ್ರ ಎಲ್ಲರ ಗಮನ ಸೆಳೆಯಿತು. ಪ್ರಧಾನಿ ಮೋದಿ ಆ ಚಿತ್ರ ಸ್ವೀಕರಿಸುವಂತೆ ಭದ್ರತಾ ಸಿಬಂದಿಗೆ ಸೂಚನೆ ನೀಡಿದರು.

