ಗುರುವಾಯನಕೆರೆ : ಎಕ್ಸೆಲ್ ಕಾಲೇಜಿನಲ್ಲಿ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಅಕ್ಷರೋತ್ಸವ ಹಾಗೂ ಎಕ್ಸೆಲ್ ಪರ್ಬ-2025 ಸಮಾರಂಭವು ನ.27ರಿಂದ 30ರ ವರೆಗೆ ವಿವಿಧ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾಲೇಜಿನ ಅರಮಲೆಬೆಟ್ಟ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಕಾಲೇಜಿನಲ್ಲಿ ನಡೆದಂತಹ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸೆಲ್ ಪರ್ಬ-2025 ಸಮಾರಂಭವು ಬೆಳಗ್ಗೆ 9ರಿಂದ ರಾತ್ರಿ 10.30ರ ವರೆಗೆ ಸಭಾ ಕಾರ್ಯಕ್ರಮ, ಎಕ್ಸೆಲ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವವು ನಡೆಯಲಿದೆ. ನ.27ರಂದು ಬೆಳಗ್ಗೆ 9ಕ್ಕೆ ಆಮಂತ್ರಣ ಪರಿವಾರದ ದಶಮಾನೋತ್ಸವ ಸಂಭ್ರಮದಲ್ಲಿ ಯಕ್ಷಗಾನ ನಾಟ್ಯ ವೈಭವ, 10.30ಕ್ಕೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಉದ್ಘಾಟಿಸಲಿದ್ದಾರೆ. ಪತ್ರಕರ್ತ ಸುರೇಂದ್ರ ಎಸ್.ವಾಗ್ಲೆ ನೂತನ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಶ್ರೀನಾಥ್ ಎಂ.ಪಿ. ಅವರು ಎಕ್ಸೆಲ್ ಅಕ್ಷರ ಗೌರವ ಪ್ರದಾನ ಮಾಡಲಿದ್ದಾರೆ. ಮಧ್ಯಾಹ್ನ 2ಕ್ಕೆ ಕನ್ನಡ ಕವಿಗೋಷ್ಠಿ, ಸಾಂಸ್ಕೃತಿಕ ವೈವಿಧ್ಯ, ಸಂಜೆ 6.30ರಿಂದ ಎಕ್ಸೆಲ್ ಟೆಕ್ನ ಸ್ಕೂಲ್ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದರು.
ನ.28ರಂದು ಮಧ್ಯಾಹ್ನ 1.30ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಬೆಳಗಾವಿ ನಿಡುಸೋಸಿ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 6.30ಕ್ಕೆ ಎಕ್ಸೆಲ್ ಪರ್ಬ ಸಮಾರಂಭವನ್ನು ನಟ ರಮೇಶ್ ಅರವಿಂದ್ ಉದ್ಘಾಟಿಸಲಿದ್ದು, ಭಾರತ ಪರಿಕ್ರಮ ಯಾತ್ರಾ ಸಾಧಕ ಸೀತಾರಾಮ ಕೆದಿಲಾಯ, ಡಿಡಿಪಿಐ ಶಶಿಧರ್ ಜಿ.ಎಸ್, ಪತ್ರಕರ್ತ ಯೋಗೀಶ್ ಹೊಳ್ಳ ಎಂ. ಭಾಗವಹಿಸಲಿದ್ದಾರೆ ಎಂದರು.
ನ. 29ರಂದು ಮಧ್ಯಾಹ್ನ 1.30ಕ್ಕೆ ಶೈಕ್ಷಣಿಕ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಅಡಿಷನಲ್ ಎಸ್ಪಿ ಅನಿಲ್ಕುಮಾರ್ ಭೂಮ ರೆಡ್ಡಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ವೆನ್ಲಾಕ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಸದಾನಂದ ಪೂಜಾರಿ, ಉಜಿರೆ ಎಸ್ಡಿಎಂ ಕಾಲೇಜು ಪ್ರಾಂಶುಪಾಲ ಡಾ| ವಿಶ್ವನಾಥ ಪಿ, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಮೂಡುಬಿದಿರೆಯ ಲೆಕ್ಕ ಪರಿಶೋಧಕ ಆಕಾಶ್ ದೀಪ್ ಭಾಗವಹಿಸಲಿದ್ದಾರೆ. ನ. 30ರಂದು ಸಂಜೆ 6.30ಕ್ಕೆ ಕಾಲೇಜು ವಾರ್ಷಿಕೋತ್ಸವದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸಹಿತ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಮಾತನಾಡಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಕೂಡ ಭಾಗವಹಿಸಬಹುದಾಗಿದೆ. ಕಾರ್ಯಕ್ರಮವು ಸಮಯಕ್ಕೆ ಸರೊಯಾಗಿ ಪ್ರಾರಂಭಗೊಂಡು ಮುಕ್ತಾಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಲೋಹಿತ್ ಉಪಸ್ಥಿತರಿದ್ದರು.

