ಉತ್ತರ ಪ್ರದೇಶ : ರಾಜ್ಯದ ಮೀರತ್ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ವೈದ್ಯರೊಬ್ಬರ ಎಡವಟ್ಟಿನಿಂದಾಗಿ ಮಗುವೊಂದು ನರಳುವಂತಾಗಿದೆ. ಮಗುವಿನ ತಲೆಗೆ ಆದ ರಕ್ತಸ್ರಾವದ ಗಾಯಕ್ಕೆ ಹೊಲಿಗೆ ಹಾಕುವ ಬದಲು, 5 ರೂಪಾಯಿಯ ಫೆವಿಕ್ವಿಕ್ ಬಳಸಿ ಚಿಕಿತ್ಸೆ ಕೊಟ್ಟ ಘಟನೆ ಕಂಡುಬಂದಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಪೋಷಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗೃತಿ ವಿಹಾರ್ನ ಪ್ರತಿಷ್ಠಿತ ಬಡಾವಣೆಯಲ್ಲಿ ಸರ್ದಾರ್ ಜಸ್ಪಿಂದರ್ ಸಿಂಗ್ ಎಂಬುವವರ ಮಗ ಮನೆಯಲ್ಲಿ ಆಟವಾಡುತ್ತಿದ್ದಾಗ ಟೇಬಲ್ ಮೂಲೆಗೆ ತಲೆ ತಾಗಿ ಗಾಯಗೊಂಡು ರಕ್ತಸ್ರಾವವಾಗಿತ್ತು. ತಕ್ಷಣವೇ ಆ ಮಗುವನ್ನು ಮಗುವನ್ನು ಭಾಗ್ಯಶ್ರೀ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು, 5 ರೂಪಾಯಿಯ ಫೆವಿಕ್ವಿಕ್ ಟ್ಯೂಬ್ ತರುವಂತೆ ಹೇಳಿ, ಅದನ್ನೇ ಬಳಸಿ ಗಾಯವನ್ನು ಮುಚ್ಚಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ರಾತ್ರಿಯಿಡೀ ಮಗುವಿನ ನೋವು ಕಡಿಮೆಯಾಗದ ಕಾರಣ, ಮರುದಿನ ಬೆಳಿಗ್ಗೆ ಕುಟುಂಬವು ಮಗುವನ್ನು ಲೋಕಪ್ರಿಯ ಆಸ್ಪತ್ರೆಗೆ ಕರೆದೊಯ್ದಿದೆ. ಅಲ್ಲಿನ ವೈದ್ಯರು ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿ, ಗಾಯದ ಮೇಲೆ ಗಟ್ಟಿಯಾಗಿದ್ದ ಅಂಟನ್ನು ತೆಗೆದುಹಾಕಿದ್ದಾರೆ. ನಂತರ ಗಾಯವನ್ನು ಸ್ವಚ್ಛಗೊಳಿಸಿ ನಾಲ್ಕು ಹೊಲಿಗೆಗಳನ್ನು ಹಾಕಿದ್ದಾರೆ. ಒಂದು ವೇಳೆ ಫೆವಿಕ್ವಿಕ್ ಮಗುವಿನ ಕಣ್ಣಿಗೆ ಸೋರಿದ್ದರೆ, ಗಂಭೀರ ಅನಾಹುತ ಸಂಭವಿಸುತ್ತಿತ್ತು. ಈ ಘಟನೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದಿತ್ತು ಎಂದು ಕುಟುಂಬ ಆತಂಕ ವ್ಯಕ್ತಪಡಿಸಿದೆ.
ಇನ್ನು, ಈ ಬಗ್ಗೆ ಮಗುವಿನ ಕುಟುಂಬ ದೂರು ನೀಡಿದೆ. ತನಿಖಾ ಸಮಿತಿಯನ್ನು ರಚಿಸಲಾಗಿದೆ. ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮೀರತ್ನ ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ಖಚಿತಪಡಿಸಿದ್ದಾರೆ.

