ಉಜಿರೆ : ಬೆಳ್ತಂಗಡಿ ತಾಲೂಕಿಗೆ ಪೊಲೀಸ್ ಉಪವಿಭಾಗ ಎಂದು ಡಿವೈ ಎಸ್ ಪಿ ಸಬ್ ಡಿವಿಷನ್ ಮಾಡಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳ ಹಿಂದೆ ಅನೇಕ ವಿಪವಿಭಾಗಗಳು ಆರಂಭವಾದ ಸಮಯದಲ್ಲಿ ಮಾಡಬಾರದು ಎಂದು ಮನವಿ ಸಲ್ಲಿಸಿದ್ದೆ. ಆದರೆ ಇಂದು ಕಾಂಗ್ರೆಸ್ ಸರಕಾರ ಜನಪ್ರತಿನಿಧಿಗಳು, ಜನಸಾಮಾನ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಮಾಡಿರುವುದನ್ನು ನಾನು ಶಾಸಕನಾಗಿ ಖಂಡಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಈ ಬಗ್ಗೆ ಉಜಿರೆಯ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾಕೆಂದರೆ ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಸರ್ಕಲ್ ಇನ್ಸ್ ಪೆಕ್ಟರ್ ಗಳಿದ್ದಾರೆ. ಇಂದು ಪ್ರತಿ ದಿನದ ಎಲ್ಲ ಆಗುಹೋಗುಗಳು ಡಿವೈ ಎಸ್ಪಿ ಕಚೇರಿಯಿಂದ ಕಂಟ್ರೋಲ್ ನಡೆಯುತ್ತದೆ. ಹೀಗಾದಾಗ ಎಲ್ಲಾ ವ್ಯವಸ್ಥೆಗೆ ಜನಸಾಮಾನ್ಯರು ಅಲೆಯುವ ಕೆಲಸ ಮಾಡಬೇಕಾಗುತ್ತದೆ. ನಿತ್ಯದ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಸರಕಾರ ಪ್ರತಿ ಠಾಣೆಗೆ ದಿನಕ್ಕಿಷ್ಟು ಪ್ರಕರಣ ದಾಖಲಿಸಬೇಕೆಂದು ಟಾರ್ಗೆಟ್ ನೀಡಿದೆ. ಇದರಿಂದ ದಿನನಿತ್ಯ ದುಡಿಯುವ ಮಂದಿಗೆ ಫೈನ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರಲ್ಲಿ ಕೇಳಿದರೆ ಸರಕಾರದ ಸೂಚನೆ ಎನ್ನುತ್ತಾರೆ.
ಕಾಂಗ್ರೆಸ್ ಸರಕಾರ ದಿವಾಳಿಯಾಗಿ ಪೊಲೀಸರ ಮೂಲಕ ಜನಸಾಮಾನ್ಯರ ದೋಚುವ ಬದಲಾಗಿ, ತಟ್ಟೆ ಹಿಡಿದು ಭಿಕ್ಷೆ ಬೇಡಬಹುದಲ್ಲವೇ. ಈ ಮೂಲಕ ಬೆಳ್ತಂಗಡಿಯಲ್ಲಿ ಜನಸಾಮಾನ್ಯರ ಪರ ಇರುವ ಕಾಂಗ್ರೆಸ್ ಪಕ್ಷದ ಮುಖಂಡರು ಹಿಂಪಡೆಯುವ ಕೆಲಸ ಮಾಡಬೇಕು. ಬೆಳ್ತಂಗಡಿಯನ್ನೇ ಕೇಂದ್ರವಾಗಿಸಿ ನಡೆಸುತ್ತಿರುವ ನಡೆಯ ಬಗ್ಗೆ ಸರಕಾರಕ್ಕೆ ನಾನು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ ಎಂದರು.

