ಹಾಸನ : ಪತಿ ಅನುಮಾನ ಪಡುತ್ತಿದ್ದಾನೆಂದು ಮಹಿಳೆಯೋರ್ವರು ತನ್ನ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಟ್ಟಸೋಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನನ್ನ ಮೇಲೆ ನನ್ನ ಗಂಡ ಅನುಮಾನ ಪಡ್ತಿದ್ದಾನೆ ಎಂದು ವಿಡಿಯೋ ಮಾಡಿ ಮಹಿಳೆ ಮಗುನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. 29 ವರ್ಷದ ಮಹಾದೇವಿ ಎಂಬ ಮಹಿಳೆ ಮೂರು ವರ್ಷದ ಹಿಂದೆಯಷ್ಟೇ ಸೀಬಿಹಳ್ಳಿ ಗ್ರಾಮದ ಕುಮಾರ್ ಎಂಬಾತನನ್ನು ವಿವಾಹವಾಗಿದ್ದರು. ಇದಕ್ಕೂ ಮುನ್ನ ಮತ್ತೊಬ್ಬನ ಜೊತೆ ಮಹಾದೇವಿ ಮದುವೆಯಾಗಿ ವಿಚ್ಛೇದನ ಪಡೆದಿದ್ದರೆಂದು ತಿಳಿದು ಬಂದಿದೆ. ಕುಮಾರ್ ಜೊತೆ ಎರಡನೇ ಮದುವೆಯಾಗಿತ್ತು. ಈತ ಮದುವೆ ಆದಾಗಿನಿಂದಲೂ ಕಿರುಕುಳ ನೀಡ್ತಿದ್ದಾನೆ ಎಂದು ಮಹಿಳೆ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.
ನಿನ್ನ ನಡತೆ ಸರಿಯಿಲ್ಲ, ಬಸ್ ಹತ್ತಿಕೊಂಡು ಬೇರೆಯವರನ್ನ ನೋಡೋಕೆ ಹೋಗ್ತಿಯಾ. ನಿನಗೆ ಹುಟ್ಟಿದ ಮಗು ನನ್ನದಲ್ಲ ಎಂದು ನನ್ನ ಗಂಡ ಹೇಳ್ತಿದ್ದಾನೆ. ನಿತ್ಯ ಅನುಮಾನದಲ್ಲೇ ಬಾಯಿಗೆ ಬಂದಂತೆ ಬೈಯ್ತಿದ್ದ. ನನ್ನ ಅತ್ತೆ ಕೂಡ ಚಿತ್ರಹಿಂಸೆ ಕೊಡ್ತಿದ್ರು. ನನ್ನಿಂದ ಯಾರಿಗೂ ಕಷ್ಟ ಬೇಡ ಎಂದು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮಹಿಳೆ ಮಹಾದೇವಿ ಸೆಲ್ಫಿ ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದಾರೆ. ಬಳಿಕ ಪುಟ್ಟ ಮಗುವಿನ ಜೊತೆ ಮಹಿಳೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆನ್ನಲಾಗಿದೆ.

