ಬೆಳ್ತಂಗಡಿ, ಡಿ. 27 : ಗ್ರಾಹಕ ಮಿತ್ರರ ಸಹಕಾರದಿಂದ ಶ್ರೀ ಗುರುದೇವ ಸೊಸೈಟಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಸಂಘದ ಸಂಸ್ಥೆಗಳನ್ನು ಪ್ರಾರಂಭಿಸಲಿದ್ದೇವೆ ಎಂದು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ ಹೇಳಿದರು.
ಅವರು, ಶ್ರೀ ಗುರುದೇವ ಸೊಸೈಟಿ ಕೇಂದ್ರ ಕಛೇರಿಯ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ಡಿ. 27 ರಂದು ನಡೆದ ಸಹಕಾರ ಸಂಘದ ಅಭಿವೃದ್ಧಿಗೆ ಕಾರಣೀಕರ್ತರಾದ ಸಹೃದಯ ಸದಸ್ಯರು ಮತ್ತು ಗ್ರಾಹಕ ಬಾಂಧವರ ಸಮ್ಮಿಲನ ಕಾರ್ಯಕ್ರಮದೊಂದಿಗೆ, ನಡೆದು ಬಂದ ಹಾದಿಯ ಮೆಲುಕು ಹಾಕುವ ಹೆಜ್ಜೆಗುರುತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಪ್ರಜ್ವಲನೆ ನೇರವೇರಿಸಿ ಮಾತನಾಡಿದರು.
ಸಂಸ್ಥೆಯ ಪ್ರಗತಿಯ ಪಯಣದಲ್ಲಿ ಹಿಂದಿನ ಪ್ರತಿ ಹೆಜ್ಜೆಗಳತ್ತ ಒಂದು ನೋಟವನ್ನು ಬಿರುವ ವಿಶೇಷ ಪ್ರಯತ್ನದ ಅಂಗವಾಗಿ ಸಂಘದ ಗ್ರಾಹಕರೊಂದಿಗೆ ಚರ್ಚಿಸಲಾಯಿತು. 26 ಶಾಖೆಗಳು, 100ಕ್ಕೂ ಹೆಚ್ಚು ಸಿಬ್ಬಂದಿಗಳು, ರೂ.ರೂ 287 ಕೋಟಿ ಠೇವಣಿ, ರೂ 1404 ಕೋಟಿ ವ್ಯವಹಾರ, ರೂ 4.84 ಕೋಟಿ ಲಾಭವನ್ನು ಸಂಸ್ಥೆಗಳಿಸಿದೆ.
ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ, ನಿರ್ದೇಶಕರಾದ ಗಂಗಾಧರ ಮಿತ್ತಮಾರು,ಚಿದಾನಂದ ಪೂಜಾರಿ ಎಲ್ಲಕ್ಕ, ಚಂದ್ರಶೇಖರ್, ಶ್ರೀಮತಿ ತನುಜಾ ಶೇಖರ್, ಧರಣೇಂದ್ರ ಕುಮಾರ್, ಸೂರಜ್ ಕುಮಾರ್, ವಿಶೇಷಾಧಿಕಾರಿ ಯಂ.ಮೋನಪ್ಪ ಪೂಜಾರಿ ಕಂಡತ್ಯಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು. ದೈನಿಕ ಸಂಗ್ರಹಕ ವಿಶ್ವನಾಥ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

