ಬೆಳ್ತಂಗಡಿ, ಜ. 23 : ಸಾಮರಸ್ಯದ ಸಂಕ್ರಾಂತಿ ಕಾರ್ಯಕ್ರಮವನ್ನು ಬಹಳಷ್ಟು ಹಿಂದೆಯೇ ಆಚರಿಸುತ್ತಿದ್ದರೆ ಇಂದು ಸಮಾಜದಲ್ಲಿ ಬಹಳಷ್ಟು ಪರಿವರ್ತನೆ ಆಗಿರುತ್ತಿತ್ತು. ಆದರೆ, ನಾನು ಇಂದು ಬಿತ್ತಿರುವ ಸಮಾನತೆಯ ಬೀಜವು ಒಂದಲ್ಲ ಒಂದು ದಿನ ಹೆಮ್ಮರವಾಗಿ ಬೆಳೆದು ನಿಲ್ಲುವ ವಿಶ್ವಾಸವಿದೆ. ನನ್ನ ಕೊನೆಯ ಉಸಿರುವ ಇರುವವರೆಗೆ ದಲಿತ ಸಮಾಜದ ಅಭಿವೃದ್ಧಿಗೆ, ಏಳಿಗೆಗೆ ನಾನು ಶ್ರಮಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.

ಜ. 22ರಂದು ಮೇಲಂತಬೆಟ್ಟುವಿನಲ್ಲಿ ನಡೆದ 09ನೇ ದಿನದ “ಸಾಮರಸ್ಯದ ಸಂಕ್ರಾಂತಿ” ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಅವರು, ಇದು ಆರ್ ಎಸ್ ಎಸ್ ಗೆ ನೂರು ಸಂವತ್ಸರ ತುಂಬಿದ ಸಂಭ್ರಮದ ವರ್ಷವಾಗಿದೆ. ಆರ್ ಎಸ್ ಎಸ್ ಜಾತಿ ಜಾತಿಗಳ ಮಧ್ಯೆ ಇರುವ ಅಂತರವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರೇರಣೆಯೊಂದಿಗೆ ಕಡಿಮೆ ಮಾಡಿದೆ. ಶಾಸಕಾಂಗ ವ್ಯವಸ್ಥೆಯಲ್ಲಿರುವ ಜನಪ್ರತಿನಿಧಿಗಳು ಜಾತಿ ಜಾತಿ ಎಂಬ ಭಾವನೆಯಿಂದ ಹೊರಬಂದು ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ರ ಆಶಯವಾಗಿತ್ತು. ಜನಪ್ರತಿನಿಧಿಯಾಗಿ ನಾನು ಈ ಆಶಯವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ “ಸಾಮರಸ್ಯದ ಸಂಕ್ರಾಂತಿ” ಮೂಲಕ ಆರಂಭಿಸಿದ್ದೇನೆ ಎಂದರು.
ಈ ವರ್ಷದಿಂದ ಜಾತಿ ಜಾತಿಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿಕೊಂಡು, ಅಸ್ಪಶ್ರ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಹಾಗೂ ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ ಎನ್ನುವ ಕಲ್ಪನೆಯೊಂದಿಗೆ ತಾಲೂಕಿನ 81 ಗ್ರಾಮಗಳ ದಲಿತ ಕಾಲೊನಿಗಳಲ್ಲಿ ಸಾಮರಸ್ಯದ ಸಂಕ್ರಾಂತಿ ಆಚರಿಸುತ್ತಿದ್ದೇವೆ. ಬಹುಶ: ಸದ್ಯಕ್ಕೆ ಯಾವುದೇ ಚುನಾವಣೆಯಿಲ್ಲ. ಚುನಾವಣೆಯಿರುತ್ತಿದ್ದರೆ ಒಂದಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಹಾಕುತ್ತಿದ್ದರು “ರಾಜಕೀಯ ಉದ್ಧೇಶಕ್ಕೋಸ್ಕರ ಹರೀಶ್ ಪೂಂಜಾ ಕಾಲೊನಿ ಕಾಲೊನಿಗೆ ತೆರಳುತ್ತಿದ್ದಾರೆಂದು.” ಆದರೆ ಅಂತಹ ಉದ್ಧೇಶ ನನಗಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆಂದು ಸಾಮರಸ್ಯದ ಸಂಕ್ರಾಂತಿಯ ಉದ್ಧೇಶವನ್ನು ಸ್ಪಷ್ಟಪಡಿಸಿದರು.

2018 ಹಾಗೂ 2023ರಲ್ಲಿ ನೀವೆಲ್ಲರೂ ನನಗೆ ಮತ ನೀಡಿ ಗೆಲ್ಲಿಸಿದ್ದೀರಿ, ಅಂದಿನಿಂದ ನಾನು ನಿಮ್ಮ ಮನೆಯ ಮಗನಾಗಿ, ತಮ್ಮನಾಗಿದ್ದೇನೆ. ಹೀಗಾಗಿ ನಾನು ನನ್ನ ಕುಟುಂಬದ ಜೊತೆಯಲ್ಲಿ ಸೇರಿಕೊಂಡು ಸಮಾನ ಸಮಾಜದ ನಿರ್ಮಾಣದ ದೃಷ್ಟಿಯಿಂದ ಸಂಕ್ರಾಂತಿ ಆಚರಿಸುವುದಕ್ಕೆ ನಿಮ್ಮ ಮನೆಗೆ ಬಂದಿದ್ದೇನೆ. ನಾನು ಈ ಕಾರ್ಯಕ್ರಮವನ್ನು ಬಹಳಷ್ಟು ವರ್ಷಗಳ ಹಿಂದೆಯೇ ಆರಂಭಿಸಿದ್ದರೆ ಈಗಾಗಲೇ ಬಹಳಷ್ಟು ಪರಿವರ್ತನೆ ಆಗಿರುತ್ತಿತ್ತು ಎನ್ನುವ ನೋವಿದೆ. ಆದರೆ, ನಾನು ಇಂದು ಬಿತ್ತಿರುವ ಈ ಸಮಾನತೆಯ ಬೀಜವು ಒಂದಲ್ಲ ಒಂದು ದಿನ ಹೆಮ್ಮರವಾಗಿ ಬೆಳೆದು ನಿಲ್ಲುವ ವಿಶ್ವಾಸವಿದೆ.
ನಮ್ಮ ಸಂಪ್ರದಾಯದಂತೆ ನಾವು ನಮ್ಮ ಸಂಬಂಧಿಕರ ಮನೆಗೆ ತೆರಳುವಾಗಲೂ ಖಾಲಿ ಕೈಯ್ಯಲ್ಲಿ ಹೋಗುವುದಿಲ್ಲ. ಹಾಗೆಯೇ, ಸಂಕ್ರಾಂತಿ ಹಬ್ಬಕ್ಕೆ ತೆರಳುವಾಗ ಖಾಲಿ ಕೈಯ್ಯಲ್ಲಿ ತೆರಳುವ ಬದಲು, ನಾನು ಹಿಂದೂ ಸಮಾಜದ ಶಕ್ತಿಯಾಗಿರುವ ತಾಯಂದಿರಿಗೆ ಉಡುಗೊರೆ ಕೊಡುವ ಮನಸ್ಸು ಮಾಡಿದೆ. ಇದು ಉಡುಗೊರೆ ನೀಡುವ ಉದ್ಧೇಶದಿಂದ ಕಾರ್ಯಕ್ರಮ ಆಯೋಜಿಸಿಲ್ಲ. ಒಂದು ವೇಳೆ ಅದೇ ಉದ್ಧೇಶವಾಗಿದ್ದರೆ ನಾನು ಕೂಡಾ ಬೇರೆ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಮಾಡುವಂತೆ ಎಲ್ಲರನ್ನೂ ಒಂದೇ ಕಡೆಸಿ ಕರೆಸಿಕೊಂಡು ಕೊಡಬಹುದಿತ್ತು. ಆದರೆ, ನಾನು ಆ ರೀತಿ ಮಾಡಿಲ್ಲ. ಬದಲಾಗಿ ದಲಿತ ಕಾಲೊನಿಗಳಿಗೆ ಭೇಟಿ ನೀಡಿ, ನಿಮ್ಮೊಂದಿಗೆ ಅನ್ನಾಹಾರ ಸೇವಿಸಬೇಕು, ಜೊತೆಯಲ್ಲೇ ಕುಳಿತುಕೊಳ್ಳಬೇಕೆಂಬ ಆಸೆಯೊಂದಿಗೆ ಹಾಗೂ ದಲಿತ ಕಾಲೊನಿಯ ಸ್ಥಿತಿಗತಿಯನ್ನು ಅರಿತುಕೊಂಡು ಕಾಲೊನಿಯ ಅಭಿವೃದ್ಧಿಯ ಬಗ್ಗೆ ಚಿಂತನೆ, ಸಮಾನ ಸಮಾಜದ ನಿರ್ಮಾಣ ಮಾಡಬೇಕೆಂಬ ಉದ್ಧೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ ಎಂದು ವಾಸ್ತವವಾಗಿ ಬದುಕುವ ಉದ್ಧೇಶವು ಈ ಕಾರ್ಯಕ್ರಮದ ಮೂಲಕ ನಮ್ಮ ಸಮಾಜ ಜಾಗೃತಗೊಳ್ಳಲಿ ಎಂಬ ಆಶಯವಿದೆ. ಇಡೀ ಗ್ರಾಮವು ಜಾತಿ ವ್ಯವಸ್ಥೆಯನ್ನು ಬದಿಗಿಟ್ಟಾಗ ಒಂದೇ ಕುಟುಂಬದಂತೆ ಬದುಕಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮವು ಜಾತಿ ತಾರತಮ್ಯವನ್ನು ತೊಡೆದು ಸಮಾಜದ ಒಗ್ಗಟ್ಟಿಗೆ ಪ್ರೇರಣೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

9ನೇ ದಿನದ ಸಾಮರಸ್ಯದ ಸಂಕ್ರಾಂತಿ
ಕಳೆದ 8 ದಿನಗಳಿಂದ ಬೆಳ್ತಂಗಡಿ ತಾಲೂಕಿನ ಪ್ರತೀ ಗ್ರಾಮಗಳಲ್ಲಿ ಸಾಮರಸ್ಯ ಸಂಕ್ರಾಂತಿ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಶಾಸಕ ಹರೀಶ್ ಪೂಂಜಾರವರು ಸಮಾನ ಸಮಾಜದ ಪಣತೊಟ್ಟಿದ್ದಾರೆ. ಅದೇ ರೀತಿ 9ನೇ ದಿನವಾದ ಜ. 22ರಂದು ಮೇಲಂತಬೆಟ್ಟು, ಸವಣಾಲು, ಶಿರ್ಲಾಲು-ಕರಂಬಾರು, ಅಳದಂಗಡಿ, ಕಾಶಿಪಟ್ನ, ಬಡಕೋಡಿ, ಹೊಸಂಗಡಿ, ಆರಂಬೋಡಿ ಹಾಗೂ ಗುಂಡೂರಿನಲ್ಲಿ “ಸಾಮರಸ್ಯದ ಸಂಕ್ರಾಂತಿ” ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ದಲಿತ ಕಾಲೊನಿಗಳನ್ನು ನೂರಾರು ಸಂಖ್ಯೆಯ ದಲಿತ ಬಾಂಧವರು ಹಾಗೂ ಬಿಜೆಪಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


