ಢಾಕಾ : ಗಂಗಾನದಿ ನೀರು ಹಂಚಿಕೆ ಒಪ್ಪಂದ ನವೀಕರಣದ ಸಂಬಂಧ ಭಾರತ ಹಾಗೂ ಬಾಂಗ್ಲಾದೇಶ ಮಧ್ಯೆ ಮಾತುಕತೆ ಆರಂಭವಾಗಿದೆ. 30 ವರ್ಷಗಳ ಹಿಂದೆ ಸಹಿ ಮಾಡಲ್ಪಟ್ಟ ಒಪ್ಪಂದ 2025ರ ಡಿಸೆಂಬರ್ ನಲ್ಲಿ ಕೊನೆಗೊಂಡ ಹಿನ್ನೆಲೆಯಲ್ಲಿ ಒಪ್ಪಂದ ನವೀಕರಣ ಸಂಬಂಧ ಮಾತುಕತೆ ಆರಂಭಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗುರುವಾರ ಉಭಯ ದೇಶಗಳ ಅಧಿಕಾರಿಗಳು ಗಂಗಾ ಮತ್ತು ಪದ್ಮಾನದಿಗಳ ನೀರಿನ ಮಟ್ಟದ ಮಾಪನ ಆರಂಭಿಸಿದ್ದಾರೆ. ಮೇ 31ರ ವರೆಗೆ ಪ್ರತಿ 10 ದಿನಗಳ ವರೆಗೆ ಜಲಮಟ್ಟವನ್ನು ದಾಖಲಿಸಲಾಗುತ್ತದೆ.
ಕೇಂದ್ರ ಜಲ ಆಯೋಗದ ಉಪ ನಿರ್ದೇಶಕ ಸೌರಭ್ ಕುಮಾರ್ ಮತ್ತು ಸಹಾಯಕ ನಿರ್ದೇಶ ಸನ್ನಿ ಅರೋರಾ ಬಾಂಗ್ಲಾದೇಶಕ್ಕೆ ತೆರಳಿದ್ದರೆ, ನಾಲ್ಕು ಮಂದಿ ಬಾಂಗ್ಲಾದೇಶ ಅಧಿಕಾರಿಗಳ ತಂಡ ಭಾರತಕ್ಕೆ ಆಗಮಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತ ತಂಡದ ಸುರಕ್ಷತೆಗೆ “ವಿಶೇಷ ಗಮನ ಹರಿಸಲಾಗಿದೆ” ಎಂದು ಬಾಂಗ್ಲಾದೇಶ ಜಲ ಸಂಪಸನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿ ಶಿಬ್ಬೇರ್ ಹುಸೈನ್ ತಿಳಿಸಿದ್ದಾರೆ.

