ಬೆಳ್ತಂಗಡಿ, ಡಿ. 13 : ಜಾತಕ ತೋರಿಸಲು ಬಂದ ಯುವತಿಯೋರ್ವಳ ಹಿಂದೆ ಬಿದ್ದು, ಮದುವೆಯಾಗುವಂತೆ ನಿರಂತರ ಕಿರುಕುಳ ನೀಡಿದ್ದ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಗೆ ಇದೀಗ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಮೂಲತಃ ಶಿರಸಿ ಮೂಲದವನಾದ, ಸ್ಥಳೀಯ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ ಶೇಷಾದ್ರಿ ಎಂಬಾತನೇ ಆರೋಪಿ ಜ್ಯೋತಿಷಿ.

ಯುವತಿಯೊಬ್ಬಳು ಜಾತಕ ತೋರಿಸಲೆಂದು ಆರೋಪಿಯ ಬಳಿ ತೆರಳಿದ್ದಳು. ಈ ವೇಳೆ ಆಕೆಯ ಮೇಲೆ ವಕ್ರ ದೃಷ್ಟಿ ನೆಟ್ಟ ಆರೋಪಿ, ಆಕೆಯ ಹಿಂದೆ ಬಿದ್ದಿದ್ದ. ನಿರಂತರವಾಗಿ ಮದುವೆಯಾಗುವಂತೆ ಕಿರುಕುಳ ನೀಡಿದ್ದಾನೆ. ಆದರೆ, ಯುವತಿ ಆರೋಪಿಯ ಮಾತಿಗೆ ಒಲ್ಲೆ ಎಂದಿದ್ದಳು. ಇದರಿಂದ ಕುಪಿತಗೊಂಡ ಆರೋಪಿ ಯುವತಿಯ ಮನೆಗೆ ತೆರಳಿ ವಾಮಾಚಾರ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ಮನೆಯವರು ದೂರು ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ನಡೆದಿತ್ತು. ಸಂತ್ರಸ್ತ ಯುವತಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದು, ಇದೀಗ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.


