ಕಳೆಂಜ : ಸರ್ವೆ ನಂ. 309ರ ಸರ್ವೆ ಕಾರ್ಯವು ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಗಡಿಭಾಗದಿಂದಲೇ ನಡೆಯಬೇಕು ಎಂದಿದ್ದೇನೆ. ಅಲ್ಲಿಂದ ಸರ್ವೆ ಕಾರ್ಯ ನಡೆದರೆ ಮಾತ್ರ ಸಂಪೂರ್ಣವಾದ ಚಿತ್ರಣ ಸಿಗುತ್ತದೆ. ಹಾಗಾಗಿ ಗಡಿಭಾಗದಿಂದಲೇ ಸರ್ವೆ ಕಾರ್ಯವನ್ನು ನಡೆಸಬೇಕು ಎಂದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಆಗ್ರಹಿಸಿದ್ದಾರೆ.
ಕಳೆಂಜದ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸರ್ವೆ ನಂ. 309ರ ವಿಚಾರ ಕಳೆದ ಎರಡು ವರ್ಷಗಳಿಂದ ಇಡೀ ರಾಜ್ಯದಲ್ಲಿ ಚರ್ಚೆ ನಡೆದಿತ್ತು. ಅರಣ್ಯ ಇಲಾಖೆಯ ಸರ್ವೆ ನಂ. 309ರಲ್ಲಿ ಸುಮಾರು 8000 ಎಕ್ರೆ ಪಹಣಿಯಲ್ಲಿ ನಮೂದಿಸಿರುತ್ತದೆ. 200-300 ವರ್ಷಗಳಿಂದ ಸುಮಾರು 200 ಕುಟುಂಬಗಳು ಸರ್ವೆ ನಂ. 309ರಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಕ್ಕುಚ್ಯುತಿ ಸಮಿತಿಗೆ ಅರಣ್ಯ ಇಲಾಖೆ ಸರ್ವೆ ರಿಪೋರ್ಟ್ ಕೊಡ್ತಾರೆ. ಆ ರಿಪೋರ್ಟ್ ನಲ್ಲಿ ಒಂದು ಸೆಂಟ್ಸ್ ಕೂಡಾ ಹೆಚ್ಚುವರಿಯಿಲ್ಲ ಎಂದು ರಿಪೋರ್ಟ್ ಕೊಟ್ಟಿದ್ದಾರೆ. ಆದರೆ ಈ ರಿಪೋರ್ಟ್ ಬೋಗಸ್ ಇದೆ, ಸ್ಥಳೀಯರಿಗೆ ಗೊತ್ತಿಲ್ಲದ ರೀತಿಯಲ್ಲಿ ತಮ್ಮ ಕಚೇರಿಯಲ್ಲಿ ಕುಳಿತು ಮಾಡಿರುವ ಸರ್ವೆ ಇದು. ಈ ಬಗ್ಗೆ ಹಕ್ಕು ಚ್ಯುತಿ ಸಮಿತಿಯ ಗಮನಕ್ಕೆ ತಂದಿದ್ದೇನೆ. ಹಕ್ಕುಚ್ಯುತಿ ಕಮಿಟಿಯವರು ಸ್ಥಳೀಯ ಶಾಸಕನಾದ ನನ್ನ ಸಕ್ಷಮದಲ್ಲಿ ಮತ್ತೊಮ್ಮೆ ಸರ್ವೆ ಕಾರ್ಯ ನಡೆಸಬೇಕು ಎಂದು ಆದೇಶ ಮಾಡುತ್ತಾರೆ. ಕಳೆದ ೬ ತಿಂಗಳ ಹಿಂದೆ ಈ ಆದೇಶ ಆಗಿರುತ್ತದೆ, ಆದರೆ ವಿಪರೀತ ಮಳೆಯ ಕಾರಣದಿಂದ ಸರ್ವೆ ಕಾರ್ಯ, ಕಾಡು ಪ್ರದೇಶವಾದ್ದರಿಂದ ಮಳೆಗಾಲದ ಬಳಿಕ ಸರ್ವೆ ಕಾರ್ಯಕ್ಕೆ ಸೂಚನೆ ನೀಡಿದ್ದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಸರ್ವೆ ಕಾರ್ಯ ನಡೆಯಲಿದೆ ಎಂದರು.
ಇನ್ನು, ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣೊರೆಸುವ ತಂತ್ರ ಮಾಡಲು ಹೊರಟಿದ್ದರು. ಆದರೆ ನಾನು ಗ್ರಾಮಸ್ಥರ ಸಮ್ಮುಖದಲ್ಲಿ ಸೂಚನೆ ನೀಡಿದ್ದೇನೆ. ಶಿವಮೊಗ್ಗದ ಆರ್ ಎಫ್ ಒ ಅನ್ನು ಚಾರ್ಜ್ ಹಾಕಿದ್ದರು, ಆದರೆ ಈಗ ಟ್ರಾನ್ಸ್ ಫರ್ ಮಾಡಿದ್ದಾರೆನ್ನುವ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸೂಕ್ತ ಅಧಿಕಾರಿಗಳನ್ನು ನೇಮಕ ಮಾಡಿ, ತಕ್ಷಣ ಸರ್ವೆ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು. ಅದರ ಜೊತೆಯಲ್ಲಿ ಹೆಚ್ಚುವರಿಯಾಗಿ ಮೂರು ಜನರನ್ನು ನಾನು ಸರ್ವೆಯರ್ ಗಳಾಗಿ ನೇಮಿಸಿದ್ದೇನೆ ಅವರ ಸಂಬಳದ ವೆಚ್ಚವನ್ನು ನನ್ನ ಕೈಯ್ಯಿಂದಲೇ ಭರಿಸುತ್ತೇನೆ. ಅದರ ಜೊತೆಯಲ್ಲಿ ಊರಿನವರು ಕೂಡಾ ಸಹಕರಿಸುತ್ತಾರೆ. ಇನ್ನು ಎರಡು ಮೂರು ದಿನದೊಳಗೆ ಅಧಿಕಾರಿಗಳನ್ನು ನೇಮಿಸಿ, ಸರ್ವೆ ಕಾರ್ಯ ಕೈಗೊಳ್ಳಬೇಕಿದೆ ಎಂದು ಹೇಳಿದರು.

