ಕಳೆಂಜ : ಸ್ಥಳೀಯ ನಿವಾಸಿ ಲೋಲಾಕ್ಷ ಅವರ ಮನೆಯನ್ನು ಕೆಡವಿದ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರೀ ವಿವಾದಕ್ಕೆ ಈಡಾಗಿದ್ದ ಸರ್ವೆ ನಂ. 309ರ ಸರ್ವೆ ಕಾರ್ಯ ಇದೀಗ ಮತ್ತೊಮ್ಮೆ ನಡೆಯಲಿದೆ. ಕಳೆಂಜ ಅರಣ್ಯ ಇಲಾಖೆ ಸುಪರ್ದಿಯ ಸರ್ವೆ ನಂ. 309ರ ಅರಣ್ಯ ಇಲಾಖೆಯ ಜಂಟಿ ಸರ್ವೇಗೆ ಶಾಸಕ ಹರೀಶ್ ಪೂಂಜರವರು ಕಳೆಂಜ ಗ್ರಾ.ಪಂ. ವಠಾರದಲ್ಲಿ ನ.17ರಂದು ಚಾಲನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾ, ಈ ಹಿಂದೆ ಲೋಲಾಕ್ಷ ಅವರ ನೂತನ ಮನೆಯ ನಿರ್ಮಾಣ ವೇಳೆ ಅರಣ್ಯ ಇಲಾಖೆ ತಡೆ ನೀಡಿತ್ತು. ಈ ಬಗ್ಗೆ ನಾನೂ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಹೋರಾಟ ನಡೆಸಿದ್ದೆವು. ಆ ಬಳಿಕ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ್ದೆನು. ೧೨ ರಿಂದ ೨೦ ಶಾಸಕರನ್ನೊಳಗೊಂಡ ಸಮಿತಿಗೆ ಹಕ್ಕುಚ್ಯುತಿ ವಿಚಾರವನ್ನು ಸಭಾಧ್ಯಕ್ಷರು ಹಸ್ತಾಂತರಿಸಿದ್ದರು. ಈ ಸಮಿತಿಗೆ ಅರಣ್ಯ ಇಲಾಖೆಯು ಸರ್ವೆಯ ರಿಪೋರ್ಟ್ ಕಳುಹಿಸಿದ್ದಾರೆ. ಆ ರಿಪೋರ್ಟ್ ಪ್ರಕಾರ ಲೋಲಾಕ್ಷ ಅವರ ಮನೆಯು ಸರ್ವೆ ನಂ. 309ರ ಒಳಗೆ ಬರುತ್ತದೆ ಎಂದಿದ್ದರು. ಆದರೆ, ನಾನು ಆ ರಿಪೋರ್ಟ್ ಅನ್ನು ಒಪ್ಪಲ್ಲಿಲ್ಲ ಮತ್ತೆ ಸರ್ವೆ ಕಾರ್ಯ ನಡೆಸಬೇಕು, ಅದು ಕೂಡಾ ನನ್ನ ಸಕ್ಷಮದಲ್ಲೇ ಮಾಡಬೇಕು ಎಂದಾಗ ಹಕ್ಕುಚ್ಯುತಿ ಕಮಿಟಿ “ಶಾಸಕರ ಉಪಸ್ಥಿತಿಯಲ್ಲಿ ಸರ್ವೆ ಕಾರ್ಯ ನಡೆಸಬೇಕು” ಎಂದಿತ್ತು. ಆದರೆ, ಈ ಸರ್ವೆ ಕಾರ್ಯಕ್ಕೆ ಮೂರು ತಿಂಗಳಿಗೂ ಹೆಚ್ಚು ಸಮಯ ಬೇಕಾದೀತು. ನಮ್ಮ ಕಡೆಯಿಂದ ಸರ್ವೆ ಕಾರ್ಯಕ್ಕೆ ಒಂದಷ್ಟು ಜನರನ್ನು ಸಂಘಟಿಸಿದ್ದೇವೆ. ಅವರ ಸಂಬಳ ಸೇರಿ ಸಂಪೂರ್ಣ ವೆಚ್ಚವನ್ನು ಊರಿನವರ ನ್ಯಾಯಕ್ಕಾಗಿ ನಾನೇ ವೈಯಕ್ತಿಕವಾಗಿ ವ್ಯಯಿಸುತ್ತೇನೆ. ನಾಳೆಯಿಂದಲೇ ಸರ್ವೆ ಕಾರ್ಯ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಪುತ್ತೂರು, ಉಪ್ಪಿನಂಗಡಿ ಅರಣ್ಯ ಸಹಾಯಕ ಸಂರಕ್ಷಣಾ ಅಧಿಕಾರಿ ಸುಬ್ಬಯ್ಯ ನಾಯ್ಕ, ಶಿವಮೊಗ್ಗ ಕಾರ್ಯಯೋಜನೆ ವಲಯಾರಣ್ಯಾಧಿಕಾರಿ ನವೀನ್ ಕುಮಾರ್, ವಲಯಾರಣ್ಯಾಧಿಕಾರಿ ಶಿವರಾಜ್ ಮಠದ್, ತಾಲೂಕು ಸರ್ವೆಯರ್ ಗಳು, ಕಳೆಂಜ ಗ್ರಾ. ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

