ಮಂಗಳೂರು : ಸರ್ಕಾರಿ ನಿಯಮದಂತೆ ಈ ಬಾರಿ ಕಂಬಳದಲ್ಲಿ ಧ್ವನಿವರ್ಧಕ ಬಳಕೆಗೆ ಕಡಿವಾಣ ಬೀಳಲಿದೆ. ಆದರೆ, ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ 24 ಗಂಟೆ ಧ್ವನಿವರ್ಧಕ ಬಳಕೆ ಮಾಡಿಕೊಂಡು ನಡೆಸಲು ಅನುಮತಿ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕಳೆದ 5 ದಶಕಗಳಿಂದ ಶನಿವಾರ ಪ್ರಾರಂಭವಾಗಿ ರವಿವಾರ ಬೆಳಗ್ಗೆಯವರೆಗೆ ನಿರಂತರ 24 ಗಂಟೆ ಕಂಬಳ ನಡೆಯುತ್ತಿದೆ. ಧ್ವನಿವರ್ಧಕ ವ್ಯವಸ್ಥೆಯೇ ಕಂಬಳ ಆಯೋಜನೆಗೆ ಮುಖ್ಯವಾಗಿ ಬಳಕೆಯಾಗುತ್ತಿದೆ. ಧ್ವನಿವರ್ಧಕ ಕಂಬಳ ನಡೆಸಲು ಅನಿವಾರ್ಯವೂ ಹೌದು. ಆದುದರಿಂದ ಕಂಬಳ ಆಯೋಜನೆಗೆ ವಿಶೇಷ ಪ್ರೋತ್ಸಾಹದ ಆವಶ್ಯಕತೆ ಇದೆ. ಪರಿಸರ ಕಾಳಜಿಯೊಂದಿಗೆ ಧ್ವನಿವರ್ಧಕ 24 ಗಂಟೆ ಬಳಸಿ ಕಂಬಳ ಸ್ಪರ್ಧೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು.
ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ| ದೇವೀಪ್ರಸಾದ್ ಶೆಟ್ಟಿ ಬೆಳಪು, ಕಾರ್ಯದರ್ಶಿ ವಿಜಯ ಕುಮಾರ್ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚಾರು ಕಲ್ಕುಡೆ ಉಪಸ್ಥಿತರಿದ್ದರು.
ಈ ಬಾರಿ ಸಬ್ ಜೂನಿಯರ್ಸ್ಪರ್ಧೆ ಇಲ್ಲ
ಕಂಬಳ ಆಯೋಜಿಸುವ ಸಂದರ್ಭದಲ್ಲಿ ಸಣ್ಣ ಪ್ರಾಯದ ಕೋಣಗಳ ಓಟಕ್ಕೆ ಅವಕಾಶ ನೀಡಬಾರದು ಎಂದು ಪಶು ಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕಂಬಳ ಆಯೋ ಜಕರಿಗೆ ಸೂಚನೆ ಬಂದಿದೆ. ಹಾಗೆಯೇ ಮುಖ್ಯ ಪಶುವೈದ್ಯಾಧಿಕಾರಿಗಳು ಈ ಬಗ್ಗೆ ಕಂಬಳ ನಡೆಯುವಲ್ಲಿ ಹೋಗಿ ಪರಿಶೀಲಿಸುವಂತೆಯೂ ಪಶುಪಾಲನ ಇಲಾಖೆಯಿಂದ ಸೂಚನೆ ಈ ಬಾರಿ ಸಲ್ಲಿಕೆಯಾಗಿದೆ. ಹೀಗಾಗಿ ಸಬ್ ಜ್ಯೂನಿಯರ್ ಸ್ಪರ್ಧೆ ಈ ಬಾರಿ ಆಯೋಜನೆ ಸಾಧ್ಯವಾಗುವುದಿಲ್ಲ. ಈ ವರ್ಷ ವಿಶೇಷವಾಗಿ ನೇಗಿಲು ಹಿರಿಯ ವಿಭಾಗದ ಸ್ಪರ್ಧೆ ಆಯೋಜನೆಗೊಂಡಿದೆ.

