ಮುಂಡಾಜೆ, ಜೂ. 12 : ಗ್ರಾಮದ ಸೀಟ್ ರಕ್ಷಿತಾರಣ್ಯದ ರಸ್ತೆ ಬದಿಯಲ್ಲಿ ಮತ್ತೆ ಕಸ ತಂದು ಸುರಿಯಲಾಗಿದೆ. ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿರುವ ಕಸದ ರಾಶಿ ರಸ್ತೆ ಬದಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಈ ಅನಾಗರಿಕ ವರ್ತನೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಕಸದ ರಾಶಿಯ ಬಗ್ಗೆ ಧ್ವನಿ ನ್ಯೂಸ್ ವರದಿ ಮಾಡಿ ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಯ ಗಮನ ಸೆಳೆದಿತ್ತು. ಆ ಬಳಿಕ ರಸ್ತೆ ಬದಿಯಲ್ಲಿ ಎರಡು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಕಳೆದ ಬಾರಿ ಕಸ ತಂದು ರಾಶಿ ಹಾಕಿದವರನ್ನು ಪತ್ತೆಹಚ್ಚಿ ದಂಡವನ್ನೂ ಗ್ರಾಮ ಪಂಚಾಯತ್ ವಿಧಿಸಿತ್ತು. ಆದರೂ, ಇದೀಗ ಮತ್ತೆ ಕಸ ತಂದು ಸುರಿದಿದ್ದಾರೆ. ಸಿಸಿ ಕ್ಯಾಮರಾದ ಅನತಿ ದೂರದಲ್ಲೇ ಕಸದ ಚೀಲ ಎಸೆದಿರುವುದು ಗ್ರಾಮ ಪಂಚಾಯತ್ ಗೆ ಸವಾಲು ಹಾಕಿದಂತಿದೆ.
ರಕ್ಷಿತಾರಣ್ಯವು ಹಸಿರಿನಿಂದಿ ಕಂಗೊಳಿಸುತ್ತಿದ್ದು, ಸ್ವಚ್ಛಂದವಾಗಿರುವ ಈ ರಸ್ತೆಯಲ್ಲಿ ಕಸ ಬಿಸಾಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹವರ ವಿರುದ್ಧ ಕೇವಲ ದಂಡ ವಿಧಿಸಿದರೆ ಸಾಲದು, ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳೂ ಕೇಳಿ ಬರುತ್ತಿದೆ.


