ಕೇರಳ : ಕೋಟ್ಟಾಯಂ ಜಿಲ್ಲೆಯಲ್ಲಿ ವಿವಾಹಿತ ಯುವತಿಯೋರ್ವಳಿಗೆ ದೆವ್ವ ಬಿಡಿಸುವ ನೆಪದಲ್ಲಿ ಮದ್ಯ ಕುಡಿಸಿ, ಬೀಡಿ ಸೇದಿಸಿ, ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಯುವತಿಯ ಪತಿ, ಆತನ ತಂದೆ ಮತ್ತು ಒಬ್ಬ ಮಾಂತ್ರಿಕನನ್ನು ಬಂಧಿಸಿದ್ದಾರೆ. ಯುವತಿಯ ಮಾನಸಿಕ ಸ್ಥಿತಿ ಹದಗೆಟ್ಟ ನಂತರ ಆಕೆಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕಳೆದ ವಾರ, ಯುವತಿಯ ಪತಿ ಅಖಿಲ್ ದಾಸ್ (26) ಮತ್ತು ಆತನ ಕುಟುಂಬದವರು ಶಿವದಾಸ್ (54) ಎಂಬ ಮಾಂತ್ರಿಕನನ್ನು ಮನೆಗೆ ಕರೆಸಿದ್ದರು. ಯುವತಿಗೆ ದೆವ್ವ ಹಿಡಿದಿದೆ ಹಾಗಾಗಿ ದೇಹದಲ್ಲಿರುವ ದೆವ್ವವನ್ನು ಹೊರ ಹಾಕಲೆಂದು ಮಾಂತ್ರಿಕನನ್ನು ಕರೆಸಲಾಗಿದೆ ಎಂದು ಹೇಳಿಕೊಂಡಿರುವ ಕುಟುಂಬ ದೆವ್ವ ಬಿಡಿಸುವ ನೆಪದಲ್ಲಿ ಮಾಟಮಂತ್ರ ಮಾಡಲು ಯುವತಿಗೆ ಸುಮಾರು ಗಂಟೆಗಳ ಕಾಲ ಹಿಂಸೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಆ ಬಳಿಕ ಯುವತಿಯ ಮಾನಸಿಕ ಸ್ಥಿತಿ ಹದಗೆಟ್ಟಿದ್ದು, ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತೆ ಪತಿಯ ತಾಯಿ ಮೃತ ಸಂಬಂಧಿಕರ ದುಷ್ಟಶಕ್ತಿಗಳು ಯುವತಿಯ ದೇಹವನ್ನು ಆವರಿಸಿಕೊಂಡಿವೆ ಎಂದು ಆರೋಪಿಸಿ, ಮಾಂತ್ರಿಕನನ್ನು ಕರೆಸಿ ಮಾಟಮಂತ್ರಕ್ಕೆ ವ್ಯವಸ್ಥೆ ಮಾಡಿದ್ದರು. ಈ ಮಾಟಮಂತ್ರದ ಪ್ರಕ್ರಿಯೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗಿ ತಡರಾತ್ರಿಯವರೆಗೂ ನಡೆದಿದೆನ್ನಲಾಗಿದೆ.
ಮಾಟ ಮಂತ್ರ ವಿಧಿ ವಿಧಾನಗಳನ್ನು ಮಾಡುವ ಸಂದರ್ಭದಲ್ಲಿ ಆಕೆಗೆ ಮದ್ಯ ಕುಡಿಸಿ, ಬೀಡಿ ಸೇದಲು ಒತ್ತಾಯಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೆ, ʼಪವಿತ್ರ ಭಸ್ಮʼ ಎಂದು ಬೂದಿಯನ್ನು ತಿನ್ನಿಸಲಾಗಿದೆ ಮತ್ತು ದೈಹಿಕವಾಗಿ ಹಲ್ಲೆ ನಡೆಸಿ ದೇಹದ ಮೇಲೆ ಸುಟ್ಟ ಗಾಯ ಸೇರಿದಂತೆ ಇತರ ದೈಹಿಕ ಹಿಂಸೆ ನೀಡಲಾಗಿದೆ. ಇದರಿಂದ ಆಕೆ ಕೊನೆಗೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇನ್ನು, ಘಟನೆ ಬಳಿಕ ಆರೋಪಿಗಳು ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದರು. ಅದರಲ್ಲಿ ಪ್ರಮುಖ ಆರೋಪಿಯಾಗಿರುವ ಮಾಂತ್ರಿಕನನ್ನು ತಿರುವಲ್ಲಾದ ಮುತ್ತೂರಿನಲ್ಲಿ ಬಂಧಿಸಿದ್ದು, ಇತರರನ್ನು ಸಹ ಬಂಧಿಸಲಾಗಿದೆ. ಆದರೆ ಸಂತ್ರಸ್ತೆ ಪತಿಯ ತಾಯಿ ಮಾತ್ರ ಇನ್ನು ತಲೆಮರೆಸಿಕೊಂಡಿದ್ದಾಳೆ.


