ಚಿಕ್ಕಮಗಳೂರು, ಫೆ. 14 : ಅಪಘಾತ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿಪೋಗೆ ಸೇರಿದ ಸರಕಾರಿ ಬಸ್ ಅನ್ನು ನ್ಯಾಯಾಲಯದ ಆದೇಶದ ಮೇರೆಗೆ ವಕೀಲರ ತಂಡ ಚನ್ನರಾಯಪಟ್ಟಣದಲ್ಲಿ ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ.
ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ನಾಗರತ್ನಮ್ಮ ಎಂಬವರಿಗೆ 12.41 ಲಕ್ಷ ರೂ. ಪರಿಹಾರದ ಹಣ ಕ್ಲೈಮ್ ಆಗದಿದ್ದಕ್ಕೆ ಪ್ರಯಾಣಿಕರನ್ನು ಇಳಿಸಿ ವಾಹನ ಸೀಜ್ ಮಾಡಲಾಗಿದೆ. ಎರಡು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ವಕೀಲರ ತಂಡ ಬಸ್ಸನ್ನು ವಶಕ್ಕೆ ಪಡೆದಿದೆ. ಪೊಲೀಸರನ್ನು ಕರೆ ತರದೇ, ಮಾಹಿತಿಯನ್ನು ನೀಡದೇ ಏಕಾಏಕಿ ವಾಹನ ವಶಕ್ಕೆ ಪಡೆದ ವಕೀಲರ ಕ್ರಮವನ್ನು ಪ್ರಯಾಣಿಕರು ಖಂಡಿಸಿದ್ದಾರೆ. ಏಕಾಏಕಿ ಬಸ್ ವಶಕ್ಕೆ ಪಡೆದುದರಿಂದ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಯಿತು.
ಅಪಘಾತದ ಹಣ ಕ್ಲೈಮ್ ಆಗದಿದ್ದಕ್ಕೆ ನ್ಯಾಯಾಲಯದಿಂದ ಗಾಡಿ ಜಪ್ತಿಗೆ ಆದೇಶ ಪಡೆಯಲಾಗಿತ್ತು. ಮೂವರು ವಕೀಲರ ತಂಡದಿಂದ ಎರಡು ಸರಕಾರಿ ಬಸ್ ಜಪ್ತಿ ಮಾಡಿ ವಾಹನವನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸಲಾಗಿದೆ. ರಸ್ತೆ ಮಧ್ಯೆ ಇಳಿಸಿದ್ದರಿಂದ ಸರಕಾರದ ವಿರುದ್ಧ ಎರಡೂ ಬಸ್ಸಿನ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಶೃಂಗೇರಿಗೆ ಬಂದು ಬೆಂಗಳೂರಿಗೆ ಹೋಗುತ್ತಿದ್ದ ಮತ್ತು ಬೆಂಗಳೂರಿನಿಂದ ಮತ್ತೆ ಚಿಕ್ಕಮಗಳೂರಿಗೆ ಬರುವಾಗ ಮಾರ್ಗ ಮಧ್ಯೆ ಬಸ್ಸುಗಳನ್ನು ತಡೆಯಲಾಗಿದೆ.

