ಬೆಳ್ತಂಗಡಿ, ಜೂ. 11 : ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಔಷಧಿ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಎರಡು ದಶಕಗಳಿಂದ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ವಿಭಾಗದಲ್ಲಿದ್ದು, ಈಗ ಮುಖ್ಯಸ್ಥನಾಗಿರುವ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ನಿವಾಸಿ ಚಂದ್ರಶೇಖರ್ ತನ್ನ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಔಷಧಾಲಯದ ಉಗ್ರಾಣದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ದೂರು ದಾಖಲಿಸಲಾಗಿದೆ.
ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೆಲಸದಿಂದ ತೆಗೆಯುತ್ತೇನೆಂದು ಹಾಕಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿಏನಿದೆ ?
ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಮುಖ್ಯ ಔಷಧಿ ವಿಭಾಗದಲ್ಲಿ ಫಾರ್ಮಸಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ 1-1-2026ರಂದು 10.30ಗಂಟೆಗೆ ದೂರುದಾರೆ ಮಹಿಳಾ ಸಿಬ್ಬಂದಿ ಬಳಿ ಬಂದು “ನೀನು ತುಂಬಾ ಚೆನ್ನಾಗಿ ಕಾಣುತ್ತೀಯಾ”ಎಂದು ಹೇಳಿ ಮುಖವನ್ನು ತನ್ನ ಕೈಯಿಂದ ಸವರಿ ಕೈ ಹಿಡಿದುಕೊಂಡು ಅಸಭ್ಯ ಹಾಗೂ ಅಸಹ್ಯ ದೃಷ್ಟಿಯಿಂದ ನೋಡಿದ್ದು, ಆರೋಪಿತನು ಈ ಹಿಂದೆಯೂ ಕೂಡ ಹಲವು ಬಾರಿ ಇದೇ ರೀತಿ ವರ್ತಿಸುತ್ತಾ ಬಳಿಗೆ ಕರೆದು ಕೈ ಹಿಡಿಯುವುದು,ಕೈ ಮುಟ್ಟುವುದು, ಮೈ ಮುಟ್ಟುವುದು, ಬೆನ್ನು ಸವರುವುದು,ಸೊಂಟ ಸ್ಪರ್ಶಿಸುವುದು, ಎದೆ ಭಾಗ ಮುಟ್ಟುವುದು, ಅಸಭ್ಯ ಕೈ ಸನ್ನೆ ಮಾಡುವುದು,ಲೈಂಗಿಕ ಉದ್ದೇಶದಿಂದ ಕೂಡಿದ ವರ್ತನೆಗಳನ್ನು ತೋರಿದ್ದಾಗಿದೆ. ಅಲ್ಲದೇ ಈ ವಿಚಾರ ಹೊರಗೆ ಗೊತ್ತಾದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದು, ದೂರುದಾರೆ ಮಹಿಳೆಯ ತಮ್ಮ ಕೆಲ ತಿಂಗಳ ಹಿಂದೆ ಸಾವನ್ನಪ್ಪಿರುವ ಆಘಾತದಲ್ಲಿದ್ದು, ತಡವಾಗಿ ದೂರು ನೀಡುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


