ಮಲವಂತಿಗೆ, ಜ. 19 : ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ ರವಿವಾರ ಸಂಜೆಯ ವೇಳೆಗೆ ಮನೆಯೊಂದರ ಸಮೀಪದಲ್ಲೇ ಆನೆಯೊಂದು ಠಿಕಾಣಿ ಹೂಡಿ ಮನೆಮಂದಿಯನ್ನು ಆತಂಕಕ್ಕೀಡು ಮಾಡಿದೆ. ದಿಡುಪೆಯ ರುಕ್ಮಯ್ಯ ಗೌಡ ಅವರ ಮನೆ ಸಮೀಪ ರವಿವಾರ ಸಂಜೆ 6ರ ಸುಮಾರಿಗೆ ಕಾಡಾನೆ ಕಂಡು ಬಂದಿದ್ದು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಪ್ರಯತ್ನಪಟ್ಟರೂ ಅದು ಕದಲದೆ ಅಲ್ಲೇ ನಿಂತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಜ. 17ರ ರಾತ್ರಿ ಕಾಡಾನೆ ದಿಡುಪೆಯ ಜನತಾ ಕಾಲನಿ, ಪೇಟೆ ಪರಿಸರ ಸೇರಿದಂತೆ ಹಲವೆಡೆ ಜನನಿಬಿಡ ಪ್ರದೇಶಗಳಲ್ಲೇ ಸಂಚರಿಸಿದೆ ಎನ್ನಲಾಗಿದೆ. ಅಲ್ಲದೆ, ತಾಲೂಕಿನ ಹಲವು ಭಾಗಗಳಲ್ಲಿ ಕಾಡಾನೆ ಸಂಚಾರ ಕಂಡು ಬಂದಿದೆ. ಜೊತೆಯಲ್ಲಿ ಚಿರತೆಯ ಹಾವಳಿಯೂ ಹೆಚ್ಚಾಗಿದ್ದು, ಜನತೆ ಆತಂಕ ಪಡುವಂತಾಗಿದೆ.

