ಬೆಳ್ತಂಗಡಿ, ಜ. 26 : ತಾಲೂಕಿನ ನಡ ಕನ್ಯಾಡಿ ಪರಿಸರ ಪ್ರದೇಶದಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದ್ದು, ಚಿರತೆಯನ್ನು ಸೆರೆಹಿಡಿಯುವಲ್ಲಿ ಇಲಾಖೆ ಕೈಗೊಂಡ ಪತ್ತೆ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ.
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ವಿಶೇಷ ತಂಡವನ್ನು ರಚಿಸಿ, ಚಿರತೆ ಸಂಚರಿಸುತ್ತಿದ್ದ ಸ್ಥಳಗಳನ್ನು ಗುರುತಿಸಿ, ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿಶೇಷ ಬೋನುಗಳನ್ನು ಸ್ಥಾಪಿಸಿತ್ತು. ಇದರ ಫಲವಾಗಿ ಇದೀಗ ಒಂದು ಚಿರತೆ ಬೋನಿಗೆ ಸಿಲುಕಿದೆ.
ಈ ಪ್ರದೇಶದಲ್ಲಿ ಚಿರತೆಯ ಓಡಾಟ ತೀವ್ರವಾಗಿದ್ದು, ಈ ಹಿಂದೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ್ದಲ್ಲದೆ, ಹಲವು ಸಾಕು ಪ್ರಾಣಿಗಳ ಮೇಲೂ ದಾಳಿ ನಡೆಸಿದ್ದ ಘಟನೆಗಳು ವರದಿಯಾಗಿದ್ದವು. ಇದರಿಂದ ಸ್ಥಳೀಯರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿತ್ತು.
ಇದೀಗ ಒಂದು ಚಿರತೆ ಬೋನಿಗೆ ಬಿದ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

