ಬೆಳ್ತಂಗಡಿ, ಜು. 9 : ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಚಾರಣಿಗರ ಸುರಕ್ಷೆ ದೃಷ್ಟಿಯಿಂದ ಕುದುರೆಮುಖ ವನ್ಯಜೀವಿ ವಿಭಾಗದ ಬೆಳ್ತಂಗಡಿ ವನ್ಯಜೀವಿ ವಲಯ ವ್ಯಾಪ್ತಿಯ ನೇತ್ರಾವತಿ ಪೀಕ್, ಕಡಮಗುಂಡಿ (ದಿಡುಪೆ) ಜಲಪಾತಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.
ನೇತ್ರಾವತಿ ಪೀಕ್ ಚಾರಣವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಜು. 10ರ ಬಳಿಕ ಮಳೆ ಪ್ರಮಾಣ, ಹವಾಮಾನ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳಲಾಗುವುದು. ದಿಡುಪೆಯ ಕಡಮಗುಂಡಿ ಜಲಪಾತಕ್ಕೂ ಜು. 9ರಿಂದ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.
ಮುಂದಿನ ಆದೇಶದವರೆಗೆ ಯಾರಿಗೂ ಜಲಪಾತದ ಪ್ರದೇಶಕ್ಕೆ ತೆರಳಲು ಅವಕಾಶ ಇರುವುದಿಲ್ಲ ಎಂದು ಬೆಳ್ತಂಗಡಿ ವನ್ಯಜೀವಿ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.



