ಹೊಸದಿಲ್ಲಿ : ದೆಹಲಿ ಕಾರು ಬಾಂಬ್ ಸ್ಪೋಟದ ಗಾಯಾಳುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ನ.12) ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಭೂತಾನ್ ಪ್ರವಾಸ ಮುಗಿಸಿ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ, ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ದು:ಖತಪ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ, ಬೇಗ ಗುಣಮುಖರಾಗುವಂತೆ ಹಾರೈಸಿದರು.

ಎರಡು ದಿನಗಳ ಭೂತಾನ್ ಭೇಟಿಯಿಂದ ರಾಜಧಾನಿ ನವದೆಹಲಿಗೆ ಹಿಂದಿರುಗಿದ ಪ್ರಧಾನಿ ಮೋದಿ, ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಕಾರು ಬಾಂಬ್ ಸ್ಪೋಟದ ಸಂತ್ರಸ್ತರನ್ನು ಭೇಟಿ ಮಾಡಲು ಲೋಕ ನಾಯಕ್ ಆಸ್ಪತ್ರೆಗೆ ಭೇಟಿ ನೀಡಿದರು. ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಆಸ್ಪತ್ರೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಪ್ರತಿಯೊಬ್ಬ ಗಾಯಾಳುವನ್ನು ವೈಯಕ್ತಿಕವಾಗಿ ಭೇಟಿ ಮಾಡಿದ ಪ್ರಧಾನಿ ಮೋದಿ, ವೈದ್ಯರಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಪ್ರಧಾನಿ ಮೋದಿ ಅವರನ್ನು ನೋಡುತ್ತಲೇ ಕಣ್ಣೀರು ಹಾಕಿದ ಮಹಿಳಾ ಗಾಯಾಳುವೋರ್ವರನ್ನು ಪ್ರಧಾನಿ ಮೋದಿ ಸಂತೈಸಿದ ದೃಶ್ಯವು ಕಂಡುಬಂದಿತ್ತು.

