ಮೈಸೂರು, ಜ. 06 : ಕರ್ನಾಟಕ ರಾಜಕಾರಣದಲ್ಲಿ ಪ್ರತಾಪಸಿಂಹ ಅವರ ಹೆಸರು ಬಹಳಷ್ಟು ಪ್ರಖರವಾಗಿರುವುದು ಗೊತ್ತೇ ಇದೆ. ವಿರೋಧಿಗಳನ್ನು ತನ್ನ ಮಾತಿನಲ್ಲೇ ಕಟ್ಟಿ ಹಾಕುವ ಇವರು, ಸಂಸದರಾಗಿ ತಮ್ಮ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿಯನ್ನೂ ನಡೆಸಿದ್ದರು. ಈ ಮಧ್ಯೆ ಸಂಸತ್ ಚುನಾವಣೆಯಲ್ಲಿ ಕಳೆದ ಬಾರಿ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಆ ಬಳಿಕ ಕೇಂದ್ರ ರಾಜಕಾರಣದಿಂದ ಹಿಂದೆ ಸರಿದು, ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಮುಂದಿನ ಚುನಾವಣೆಗೆ ಅವರು ಮೈಸೂರಿನ ಒಂದು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಲ್ಲಿ, ಟಿಕೆಟ್ ಸಿಗುತ್ತಾ ಅನ್ನೋದು ಕಾದು ನೋಡಬೇಕಿದೆ.
ಸಂಸತ್ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಬಳಿಕ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಾಜಿ ಸಂಸದ ಪ್ರತಾಪಸಿಂಹ, ಮೈಸೂರು ನಗರ ವ್ಯಾಪ್ತಿಯ ಪ್ರತಿಷ್ಠಿತ ಚಾಮರಾಜ ವಿಧಾನಸಭಾ ಕ್ಷೇತ್ರದ ಮೇಲೆ ಕಟ್ಟಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ಸ್ವತ: ಅವರೇ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ರಾಜಕಾರಣ ಮುಗಿದ ಮೇಲೆ ರಾಜ್ಯ ರಾಜಕಾರಣಕ್ಕೆ ಬರಬೇಕಿದ್ದು ಅದರಂತೆ ನಾನು ಸಹಜವಾಗಿಯೇ ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ನನಗೆ ಎಲ್ಲ ದೃಷ್ಟಿಯಿಂದಲೂ ಚಾಮರಾಜ ಕ್ಷೇತ್ರ ಅನುಕೂಲಕರವಾಗಿದೆ. ಹೀಗಾಗಿ ಸಹಜವಾಗಿ ಚಾಮರಾಜ ಕ್ಷೇತ್ರ ನನ್ನ ಆಯ್ಕೆಯಾಗಿದೆ ಎಂದರು.

