ಬೆಳ್ತಂಗಡಿ, ಡಿ. 17 : ಪೃಥ್ವಿ ಜ್ಯುವೆಲ್ಲರ್ಸ್ ಬೆಳ್ತಂಗಡಿ ಮಳಿಗೆಯಲ್ಲಿ ನಡೆದಿದೆನ್ನಲಾದ ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸಂಸ್ಥೆಯ ಶೌಚಾಲಯದಲ್ಲಿ ವಿದ್ಯಾರ್ಥಿಗಳು ವೀಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದರು, ಇದನ್ನು ಪ್ರಶ್ನೆ ಮಾಡಿದ ವಿಚಾರ ಸಂಬಂಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸಂಸ್ಥೆಯ ಮ್ಯಾನೇಜರ್ ಆಗಿರುವ ಅಶೋಕ್ ಡಿ. ಬಂಗೇರ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ ಅವರು, ನಾವು ಶೌಚಾಲಯ ಕಡೆಗೆ ತೆರಳುತ್ತಿದ್ದಾಗ ಅಲ್ಲಿ ಯಾರೋ ಶೌಚಾಲಯ ಕಿಟಕಿ ಬಳಿ ಮೊಬೈಲ್ ಹಿಡಿದಿರುವುದು ಕಂಡು ಬಂತು. ಇದನ್ನು ಪರಿಶೀಲಿಸಿದಾಗ ಮೂವರು ಬಾಲಕರು ಪರಾರಿಯಾಗಲೆತ್ನಿಸಿದ್ದಾರೆ. ಆಗ ನಾವು ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆವು, ಮತ್ತೋರ್ವ ಬಾಲಕ ಪರಾರಿಯಾಗಿದ್ದನು. ಅದರಲ್ಲಿ ಒಬ್ಬನ ಮೊಬೈಲ್ ನಲ್ಲಿ ವೀಡಿಯೋಗಳಿರುವ ಶಂಕೆಯಿದ್ದು, ಆತ ಸ್ಥಳದಿಂದ ಪರಾರಿಯಾಗಿದ್ದನು. ವಶಕ್ಕೆ ಪಡೆದ ಬಾಲಕರು ವಿದ್ಯಾರ್ಥಿಗಳಾದ ಕಾರಣ ನಾವು ಪೊಲೀಸ್ ಠಾಣೆಗೆ ಮಾಹಿತಿ ನೀಡದೆ, ನೇರವಾಗಿ ಬಾಲಕರ ಪೋಷಕರಿಗೆ ಮಾಹಿತಿ ನೀಡಿದೆವು. ಅವರ ಬಳಿ ವಿಚಾರಿಸಿದಂತಹ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ತೆರಳಿದ್ದಾರೆಂಬ ಮಾಹಿತಿ ನೀಡಿದ್ದರು, ಆದರೆ ವಿದ್ಯಾರ್ಥಿಗಳು ಶಾಲೆಗೆ ತೆರಳದೆ ನಮ್ಮ ಸಂಸ್ಥೆಯ ಶೌಚಾಲಯದ ವೀಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದರು. ಅದರಲ್ಲಿ ಒಬ್ಬ ನಮ್ಮ ಸಂಸ್ಥೆಯ ಗ್ರಾಹಕರೋರ್ವರ ಮಗನಾಗಿದ್ದಾನೆ ಎಂದು ಮಾಹಿತಿ ನೀಡಿದರು.
ಅವರ ಶಾಲಾ ಬ್ಯಾಗ್ ತೆಗೆದಿಟ್ಟು ಪೋಷಕರನ್ನು ಬರುವಂತೆ ಸೂಚನೆ ನೀಡಿದ್ದರು. ಆ ಬಳಿಕ 10-15 ಮಂದಿ ನಮ್ಮ ಸಂಸ್ಥೆಯ ಮುಂದೆ ಬಂದು ನಮಗೆ ಮತ್ತು ನಮ್ಮ ಸಂಸ್ಥೆಯ ಮಹಿಳಾ ಸಿಬ್ಬಂದಿಗಳಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೆ, ನಮಗೆ ಕರೆಗಳ ಮೂಲಕ ಹಲವಾರು ಮಂದಿ ಜೀವ ಬೆದರಿಕೆ ಹಾಕುತ್ತಿದ್ದರು. ನಾವು ಕಿಡ್ನ್ಯಾಪ್ ಮಾಡಿದ್ದೆವು, ಹಲ್ಲೆ ನಡೆಸಿದ್ದೆವು ಎಂದು ಅವರು ಆರೋಪ ಮಾಡಿದ್ದಾರೆ. ಆದರೆ, ನಾವು ಯಾವುದೇ ರೀತಿಯಲ್ಲಿ ಕಿಡ್ನ್ಯಾಪ್ ಅಥವಾ ಹಲ್ಲೆ ನಡೆಸಿಲ್ಲ ಇದಕ್ಕೆ ಬೇಕಾದ ಸಿಸಿಟಿವಿ ದಾಖಲೆಗಳು ನಮ್ಮ ಬಳಿ ಇದೆ ಎಂದರು.
ನಾವು ಯಾವುದೇ ಧರ್ಮವನ್ನು ಕೇಳಿಲ್ಲ, ನಾವು ಕಳೆದ 08 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಸರ್ವ ಧರ್ಮಿಯರನ್ನೂ ಗೌರವಿಸಿಕೊಂಡು ಕಾರ್ಯಾಚರಿಸುತ್ತಿದ್ದೇವೆ. ಡಿ. 15ರಂದು ಸಂಜೆ ಘಟನೆ ನಡೆದಿತ್ತು, ಡಿ. 16ರಂದು ವಾರ್ಷಿಕ ಸಭೆಗಾಗಿ ಸಕಲೇಶಪುರಕ್ಕೆ ತೆರಳಿದ್ದೆವು, ಈ ಕಾರಣದಿಂದ ಇಂದು ಬೆಳಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದೇವೆ. ಬಾಲಕರ ಒಂದು ಮೊಬೈಲ್ ಅನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ, ಎಬಿಎಂ ಕೃಪೇಶ್, ಸಿಬ್ಬಂದಿಗಳಾದ ರಮ್ಯಾ ಹಾಗೂ ಪ್ರಮೀಳಾ ಉಪಸ್ಥಿತರಿದ್ದರು.

