ಮೊಹಾಲಿ, ಫೆ. 17 : ಪಂಜಾಬ್ ಸಿಎಂ ಭಗವಂತ್ ಮಾನ್ ದಾಖಲಾದ ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತೀವ್ರ ಶೋಧ ನಡೆಸಲಾಗುತ್ತಿದೆ.
ಅನಾರೋಗ್ಯದ ಹಿನ್ನೆಲೆ ಮಾನ್ ಮೊಹಾಲಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ 1:11 ನಿಮಿಷಕ್ಕೆ ಸ್ಫೋಟ ಸಂಭವಿಸೋದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಇದರ ಜೊತೆಗೆ ಮೊಹಾಲಿಯ ಹಲವು ಖಾಸಗಿ ಶಾಲೆಗಳನ್ನ ಕೂಡ ಗುರಿಯಾಗಿಸಿ ಬೆದರಿಕೆ ಕರೆ ಬಂದಿತ್ತು.
ಈ ಬೆದರಿಕೆಯಿಂದಾಗಿ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳನ್ನ ತಕ್ಷಣ ತೆರವುಗೊಳಿಸಲಾಯಿತು. ಪೋಷಕರು ಮಕ್ಕಳನ್ನು ಕರೆದೊಯ್ಯಲು ಧಾವಿಸಿದ್ದರಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಬಾಂಬ್ ಬೆದರಿಕೆ ಬೆನ್ನಲ್ಲೇ ಆಸ್ಪತ್ರೆ ಮತ್ತು ಶಾಲೆಗಳನ್ನು ಸಂಪೂರ್ಣ ಖಾಲಿ ಮಾಡಿಸಲಾಯಿತು. ಪಂಜಾಬ್ ಪೊಲೀಸ್ ಮತ್ತು ಗುಪ್ತಚರ ಏಜೆನ್ಸಿಗಳು ತಕ್ಷಣ ಕಾರ್ಯಾಚರಣೆ ನಡೆಸಿವೆ. ಬಾಂಬ್ ನಿಷ್ಕ್ರೀಯ ತಂಡಗಳು ಸ್ಥಳಕ್ಕೆ ಆಗಮಿಸಿ ತೀವ್ರ ತಪಾಸಣೆ ನಡೆಸುತ್ತಿವೆ. ಈವರೆಗೆ ಯಾವುದೇ ಸ್ಫೋಟಕ ವಸ್ತುಗಳು ಅಥವಾ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿರುವುದಿಲ್ಲ ಎಂದು ತಿಳಿದು ಬಂದಿದೆ.

