ಪಣಜಿ : ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ದೈವಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಾಗಿದೆ. ಇತ್ತೀಚೆಗೆ ರಣ್ವೀರ್ ಸಿಂಗ್ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತುಗಳನ್ನಾಡುತ್ತಾ, ರಿಷಬ್ ಶೆಟ್ಟಿ ಅವರ ಅಭಿನಯವನ್ನು ಶ್ಲಾಘಿಸಿದ್ದರು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈ ವೇಳೆ ಅವರು ಅನುಚಿತ ರೀತಿಯಲ್ಲಿ ದೈವದ ಅನುಕರಣೆ ಮಾಡಿದ್ದರು. ಇದಲ್ಲದೆ ಅವರು ದೈವವನ್ನು ‘ದೆವ್ವ’ವೆಂದು ಕರೆದಿದ್ದರು. ಈ ವೇಳೆ ರಿಷಬ್ ಶೆಟ್ಟಿ ಅವರು ವೇದಿಕೆಯ ಕೆಳಗೆ ಕೂತಿದ್ದರು ಎನ್ನಲಾಗಿದೆ.
ರಣ್ವೀರ್ ಸಿಂಗ್ ಅವರ ವರ್ತನೆಗೆ ತುಳುನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅವರು ದೈವದ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕೆಂಬ ಕೂಗೂ ಕೇಳಿ ಬರುತ್ತಿದೆ. ಅಲ್ಲದೆ, ಇದೀಗ ರಣೇರ್ ಸಿಂಗ್ ವಿರುದ್ಧ ಹಿಂದು ಜನಜಾಗೃತಿ ಸಮಿತಿ (ಎಚ್ಜೆಎಸ್) ರಣ್ವೀರ್ ಸಿಂಗ್ ವಿರುದ್ಧ ಗೋವಾದ ಪಣಜಿಯಲ್ಲಿ ದೂರು ದಾಖಲಿಸಿದೆ. ಅವರು ಹಿಂದೂ ಭಾವನೆಗೆ ಧಕ್ಕೆ ತಂದಿದ್ದಾರೆ ಅವರು ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ‘ಚಾವುಂಡಿ’ ದೈವವು ಭಕ್ತರಿಗೆ ಪೂಜನೀಯವಾಗಿದ್ದು, ತುಳು ಸಮುದಾಯಕ್ಕೆ ಅತ್ಯಂತ ಮಹತ್ವದ ದೈವವಾಗಿದೆ. ಆದರೆ ದೈವವನ್ನು ಕೆಟ್ಟ ರೀತಿಯಲ್ಲಿ ರಣೇರ್ ಅನುಕರಣೆ ಮಾಡಿದ್ದಾರೆ. ರರ್ ಸಿಂಗ್ ಅವರ ಈ ರೀತಿಯ ನಡೆಯು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮಾತ್ರವಲ್ಲದೆ, ಸಾರ್ವಜನಿಕ ಶಾಂತಿಯನ್ನು ಕದಡುವ ಕಾರ್ಯವಾಗಿದೆ. ಈ ಕುರಿತು ತನಿಖೆಯನ್ನು ಮಾಡಿ, ನಟನ ವಿಚಾರಣೆ ನಡೆಸಿ, ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಕ್ಷಮೆ ಕೋರಿದ ರಣೇರ್:
ರಣೇರ್ ವಿರುದ್ಧ ಆಕ್ರೋಶ ಹೆಚ್ಚಾದ ಹಿನ್ನೆಲೆ ಅವರು ತನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಕ್ಷಮೆ ಕೋರಿದ್ದಾರೆ. “ಕಾಂತಾರ-1 ಸಿನಿಮಾದಲ್ಲಿನ ರಿಷಬ್ ಅವರ ಅತ್ಯದ್ಭುತ ಶ್ರಮವನ್ನು ಹೊಗಳುವುದು ನನ್ನ ಉದ್ದೇಶವಾಗಿತ್ತು. ಒಬ್ಬ ನಟನಾಗಿ ಒಂದು ಪಾತ್ರಕ್ಕೆ ಜೀವ ತುಂಬಲು ಅದೆಷ್ಟು ಪರಿಶ್ರಮ ಬೇಕು ಎಂಬುದು ನನಗೆ ತಿಳಿದಿದೆ. ಹಾಗಾಗಿ ನಾನು ಆ ಪಾತ್ರವನ್ನು ಅನುಕರಿಸಲು ಹೋಗಿದ್ದೆ. ಇದರಲ್ಲಿ ಬೇರೆ ಯಾವುದೇ ದುರುದುದ್ದೇಶ ಇಲ್ಲ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

