ಬೆಂಗಳೂರು, ಮಾ. 24 : ಆರ್ಸಿಬಿ ತಂಡದ ಜತೆ ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ. ವಿರಾಟ ಕೊಹ್ಲಿ ಸೇರಿ ಮೂರು ಆಟಗಾರರು ಭಾವಚಿತ್ರ ಬಳಸಲು ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಬರೋಬ್ಬರಿ 4.8 ಕೋಟಿ ರೂ. ಕೆಎಂಎಫ್ ವೆಚ್ಚ ಮಾಡಿದೆ.
ಆರ್ಸಿಬಿ ತಂಡದ ಜತೆ ಡೈರಿ ಪಾರ್ಟನರ್ ಆಗಿರುವ ಬಗ್ಗೆ ಮಂಗಳವಾರ ಕೆಎಂಎಫ್ ಅಧಿಕೃತ ಮಾಹಿತಿ ನೀಡಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶಿವಸ್ವಾಮಿ ಮಾತನಾಡಿ, “ನಂದಿನಿ ಬ್ರ್ಯಾಂಡ್ ಯಾವಾಗಲೂ ಕ್ರೀಡೆ ಮತ್ತು ಯುವಜನತೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಕರ್ನಾಟಕದ ಅಸ್ಮಿತೆಯಂತಿರುವ ನಂದಿನಿ ಮತ್ತು ಆರ್ಸಿಬಿ ಒಂದಾಗಿರುವುದು ನಮಗೆ ಅತ್ಯಂತ ಸಂತೋಷದ ವಿಷಯ. ಈ ಮೂಲಕ ಆರ್ಸಿಬಿ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕ ಬೆಳೆಸಲು ನಾವು ಉತ್ಸುಕರಾಗಿದ್ದೇವೆ” ಎಂದು ತಿಳಿಸಿದ್ದಾರೆ.
ನಂದಿನಿ ಬ್ರ್ಯಾಂಡ್ನ ಯಾವುದೇ ಜಾಹೀರಾತುಗಳು ಕ್ರೀಡಾಂಗಣದಲ್ಲಿ ಪ್ರಕಟವಾಗುವುದಿಲ್ಲ. ಮೇಲೂ ಸಹ ನಂದಿನಿ ಲಾಂಛನ ಇರುವುದಿಲ್ಲ. ಬದಲಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಆರ್ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ತ ಪಡಿಕಲ್ ಜರ್ಸಿ ಭಾವಚಿತ್ರ ಬಳಸಿಕೊಳ್ಳಲು ಅವಕಾಶವಿರುತ್ತದೆ ಎಂದು ಬಿ ಶಿವಸ್ವಾಮಿ ಹೇಳಿದ್ದಾರೆ.
ಈಗಾಗಲೇ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೂ ಪ್ರಾಯೋಜಕತ್ವ ನೀಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ನಂದಿನಿ, ಈಗ ತನ್ನದೇ ರಾಜ್ಯದ ಆರ್ಸಿಬಿ ತಂಡಕ್ಕೆ ಬೆಂಬಲ ನೀಡುತ್ತಿರುವುದು ಅಭಿಮಾನಿಗಳಲ್ಲಿ ಹರ್ಷ ತಂದಿದೆ.

